ಉತ್ತರಪ್ರದೇಶದಲ್ಲಿ ಗೋವುಗಳ ಕಳೇಬರ ಪತ್ತೆ: ಎಂಟು ಅಧಿಕಾರಿಗಳ ಅಮಾನತು
ಲಕ್ನೋ, ಜು. 15: ಉತ್ತರಪ್ರದೇಶ ಸರಕಾರ ನಡೆಸುತ್ತಿರುವ ಗೋಶಾಲೆಗಳಲ್ಲಿ ಗೋವುಗಳ ಕಳೇಬರ ಪತ್ತೆಯಾದ ಬಳಿಕ ಅಯೋಧ್ಯೆ ಹಾಗೂ ಮಿರ್ಝಾಪುರ ಜಿಲ್ಲೆಯ 8 ಸರಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಇತರ ಹಲವು ಜಿಲ್ಲೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಹಾಗೂ ರಾಜ್ಯಾದ್ಯಂತ ಇರುವ ಗೋಶಾಲೆಗಳ ಪುನರ್ ಪರಿಶೀಲನೆಗೆ ಆದೇಶ ನೀಡಲಾಗಿದೆ. ಕಳೆದ ಕೆಲವು ವಾರಗಳ ಹಿಂದೆ ಉತ್ತರಪ್ರದೇಶದಾದ್ಯಂತ ರಾಜ್ಯ ಸರಕಾರ ನಡೆಸುತ್ತಿರುವ ಗೋಶಾಲೆಗಳಲ್ಲಿ ಹಲವು ಗೋವುಗಳ ಕಳೇಬರ ಪತ್ತೆಯಾಗಿತ್ತು. ಹಸಿವು, ಮಳೆ ಹಾಗೂ ಮಿಂಚಿನಿಂದ ಗೋವುಗಳು ಸಾವನ್ನಪ್ಪಿದ್ದವು ಎಂದು ಹೇಳಲಾಗಿತ್ತು.
2017ರ ವಿಧಾನ ಸಭೆ ಚುನಾವಣೆಯಲ್ಲಿ ಆದಿತ್ಯನಾಥ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗೋವು ಸಂರಕ್ಷಣೆ ಸರಕಾರದ ಮುಖ್ಯ ಕಾರ್ಯಸೂಚಿಗಳಲ್ಲಿ ಒಂದಾಗಿತ್ತು. ಬೀಡಾಡಿ ಗೋವುಗಳು ಹೊಲ ಮೇಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾದ ಹಾಗೂ ರೈತರು ಅವುಗಳನ್ನು ಶಾಲೆಗಳು, ಸರಕಾರಿ ಕಟ್ಟಡದಲ್ಲಿ ಕೂಡಿ ಹಾಕಿದ ಬಳಿಕ ಮುಖ್ಯಮಂತ್ರಿ ಆದಿತ್ಯನಾಥ್ ಅವರು ರಾಜ್ಯಾದ್ಯಂತ ಗೋಶಾಲೆಗಳನ್ನು ಕಟ್ಟಿಸುವಂತೆ ಆದೇಶ ನೀಡಿದ್ದರು.