ಪಕ್ಷ ತೊರೆದ ಪಿಡಿಪಿ ಸ್ಥಾಪಕ ಸದಸ್ಯ ಮುಹಮ್ಮದ್ ಖಲೀಲ್
ಶ್ರೀನಗರ, ಜು.17: ಪಿಡಿಪಿ ಪಕ್ಷದ ಸ್ಥಾಪಕ ಸದಸ್ಯ ಮುಹಮ್ಮದ್ ಖಲೀಲ್ ಬಂಧ್ ಬುಧವಾರ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ನಿಧನದ ಬಳಿಕ ಪಕ್ಷವನ್ನು ಮುಗಿಸಲಾಗಿದೆ ಎಂದು ಹೇಳಿದ್ದಾರೆ. ಪಕ್ಷದ ಮೂಲ ಸಿದ್ಧಾಂತದ ಜೊತೆ ರಾಜಿ ಮಾಡಿಕೊಂಡಿರುವ ಕಾರಣ ಪಕ್ಷದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪಕ್ಷಾಧ್ಯಕ್ಷೆ ಮೆಹಬೂಬ ಮುಫ್ತಿಗೆ ಬರೆದಿರುವ ಪತ್ರದಲ್ಲಿ ಅವರು ಹೇಳಿದ್ದಾರೆ.
ಬೆಂಬಲಿಗರೊಂದಿಗೆ ಸಮಾಲೋಚಿಸಿದ ಬಳಿಕ ಪಿಡಿಪಿಯ ಪುಲ್ವಾಮ ಜಿಲ್ಲಾಧ್ಯಕ್ಷ ಹುದ್ದೆಯ ಜೊತೆಗೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೇನೆ. ಸರಕಾರದಲ್ಲಿ ಅಥವಾ ಪಕ್ಷದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಅಧಿಕಾರವಿಲ್ಲದ ಪರಿಸ್ಥಿತಿಯಿದೆ ಎಂದು ಖಲೀಲ್ ಹೇಳಿದ್ದಾರೆ. ಖಲೀಲ್ ಮೂರು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಮುಫ್ತಿ ಮುಹಮ್ಮದ್ ಅವರ ನಿಧನಾನಂತರ ಪಕ್ಷದಲ್ಲಿ ಹಿರಿಯ ಸದಸ್ಯರನ್ನು ಕಡೆಗಣಿಸುವ ಜೊತೆಗೆ ಅವಮಾನಿಸಲಾಗುತ್ತಿದೆ ಎಂದು ಖಲೀಲ್ ಹೇಳಿದ್ದಾರೆ.