ಹನುಮಾನ್ ಚಾಲೀಸ ಕಾರ್ಯಕ್ರಮದಲ್ಲಿ ಪಾಲೋಂಡದಕ್ಕೆ ಬೆದರಿಕೆ: ಆರೋಪ
ಕೋಲ್ಕತ್ತಾ ಜು.18: ಹನುಮಾನ್ ಚಾಲೀಸವನ್ನು ಪಠಿಸುವ ಕಾರ್ಯಕ್ರಮದಲ್ಲಿ ಹಿಜಾಬ್ ಧರಿಸಿ ಪಾಲ್ಗೊಂಡಿದ್ದಕ್ಕೆ ತನಗೆ ನಿಂದಿಸಿ ಜೀವಬೆದರಿಕೆ ಒಡ್ಡಲಾಗಿದೆ ಎಂದು ಕೋಲ್ಕತಾದ ಬಿಜೆಪಿ ಸದಸ್ಯೆ ಇಶ್ರತ್ ಜಹಾನ್ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಭಾವ ಹಾಗೂ ಮನೆಯ ಮಾಲಕ ಜೀವಬೆದರಿಕೆ ಒಡ್ಡಿದ್ದಾರೆ ಎಂದವರು ದೂರಿದ್ದಾರೆ. ಇಶ್ರತ್ ಜಹಾನ್ ತ್ರಿವಳಿ ತಲಾಖ್ ಪದ್ಧತಿಯನ್ನು ವಿರೋಧಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವರು.
ಹೌರಾದ ಎಸಿ ಮಾರುಕಟ್ಟೆ ಮುಂಭಾಗ ಬುಧವಾರ ಬಿಜೆಪಿ ಬೆಂಬಲಿಗರು ಆಯೋಜಿಸಿದ್ದ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮದಲ್ಲಿ ತಾನು ಪಾಲ್ಗೊಂಡಿದ್ದೆ. ಬಳಿಕ ಮನೆಗೆ ಮರಳಿದ್ದಾಗ ಸುಮಾರು ನೂರು ಮಂದಿಯಿದ್ದ ಗುಂಪೊಂದು ಮನೆಗೆ ಆಗಮಿಸಿ ಹಿಂದೂ ಧರ್ಮದ ಕಾರ್ಯಕ್ರಮದಲ್ಲಿ ಹಿಜಾಬ್ ಧರಿಸಿ ಪಾಲ್ಗೊಂಡಿರುವ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಮನೆಯನ್ನು ತಕ್ಷಣ ಖಾಲಿ ಮಾಡಿ ತೆರಳಬೇಕು. ಇಲ್ಲದಿದ್ದರೆ ಬಲವಂತವಾಗಿ ಮನೆಯಿಂದ ಎತ್ತಿ ಹೊರಗೆಸೆಯಲಾಗುವುದು ಎಂದು ಬೆದರಿಸಿದ್ದಾರೆ.
ತನ್ನ ಪುತ್ರನೊಂದಿಗೆ ಏಕಾಂಗಿಯಾಗಿ ಬದುಕುತ್ತಿರುವ ಕಾರಣ ಭಯವಾಗಿದೆ ಎಂದು ಇಶ್ರತ್ ಜಹಾನ್ ಪೊಲೀಸರಿಗೆ ದೂರು ನೀಡಿದ್ದಾರೆ. ಜಾತ್ಯಾತೀತ ರಾಷ್ಟ್ರದಲ್ಲಿ ಬದುಕುತ್ತಿರುವ ನಮಗೆ ಯಾವುದೇ ಪವಿತ್ರ ಹಬ್ಬದಲ್ಲಿ ಪಾಲ್ಗೊಳ್ಳುವ ಪ್ರಜಾಪ್ರಭುತ್ವ ಹಕ್ಕಿದೆ. ಓರ್ವ ಜಾತ್ಯಾತೀತ ವ್ಯಕ್ತಿಯಾಗಿ ನಡೆದುಕೊಂಡಿದ್ದೇನೆ. ಆದರೆ ಇದೀಗ ತನಗೆ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಇಶ್ರತ್ ಜಹಾನ್ ದೂರಿದ್ದಾರೆ.