Breaking News: ದೇಶದ ಹಿರಿಮೆಗೆ ಮತ್ತೊಂದು ಗರಿ: ಚಂದ್ರಯಾನ-2 ಯಶಸ್ವಿ ಉಡಾವಣೆ
ಚಂದ್ರಯಾನ-2ನ್ನು ಯಶಸ್ವಿಯಾಗಿ ಭೂ ಕಕ್ಷೆಗೆ ಸೇರಿಸಿದ ‘ಬಾಹುಬಲಿ’
Photo: facebook.com/ISRO
►ಇಸ್ರೋ ವಿಜ್ಞಾನಿಗಳಿಂದ ಸಂಭ್ರಮಾಚರಣೆ
► ಸೆ.6-8ರ ನಡುವೆ ಚಂದಿರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಿರೀಕ್ಷೆ
III-ಶ್ರೀಹರಿಕೋಟಾ(ಆಂ.ಪ್ರ),ಜು.22: ಚಂದ್ರನತ್ತ ಶತಕೋಟಿ ಕನಸುಗಳೊಂದಿಗೆ ತನ್ನ ಮಹತ್ವಾಕಾಂಕ್ಷೆಯ ದ್ವಿತೀಯ ಚಂದ್ರ ಅಭಿಯಾನ ‘ಚಂದ್ರಯಾನ-2’ರ ಐತಿಹಾಸಿಕ ಪಯಣಕ್ಕೆ ಭಾರತವು ಸೋಮವಾರ ಚಾಲನೆ ನೀಡಿತು. ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್,43.43 ಮೀ.ಎತ್ತರದ ಮತ್ತು 640 ಟನ್ ಭಾರದ ಜಿಎಸ್ಎಲ್ವಿ ಮಾರ್ಕ್ ಎಂI ‘ಬಾಹುಬಲಿ’ಯ ಒಡಲಲ್ಲಿ ಬೆಚ್ಚಗೆ ಕುಳಿತುಕೊಂಡು ಬಾಹ್ಯಾಕಾಶದತ್ತ ಸಾಗಿದ ಚಂದ್ರಯಾನ-2 ತನ್ನ ಲ್ಯಾಂಡರ್ ಅನ್ನು ಈವರೆಗೆ ಯಾವುದೇ ದೇಶವು ಸ್ಪರ್ಶಿಸಿರದ ಚಂದ್ರನ ಕತ್ತಲೆಯ ಸಾಮ್ರಾಜ್ಯವಾಗಿರುವ ದಕ್ಷಿಣ ಧ್ರುವದಲ್ಲಿ ಇಳಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲಿದೆ. ಜೊತೆಗೆ ಭಾರತವನ್ನು ಅಮೆರಿಕ,ರಷ್ಯಾ ಮತ್ತು ಚೀನಾಗಳ ನಂತರ ಚಂದ್ರನ ಮೇಲ್ಮೈಗೆ ಲಗ್ಗೆ ಹಾಕಿದ ವಿಶ್ವದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿಸಲಿದೆ.
ಮಧ್ಯಾಹ್ನ 2:43ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅತ್ಯಂತ ಕರಾರುವಕ್ಕಾಗಿ ನಭಕ್ಕೆ ಚಿಮ್ಮಿದ ‘ಬಾಹುಬಲಿ’16 ನಿಮಿಷಗಳ ಬಳಿಕ 3,850 ಕೆ.ಜಿ.ತೂಕದ ಚಂದ್ರಯಾನ-2ನ್ನು ಯಶಸ್ವಿಯಾಗಿ ಭೂಕಕ್ಷೆಗೆ ಸೇರಿಸುವ ಮೂಲಕ ಇಸ್ರೋ ವಿಜ್ಞಾನಿಗಳಲ್ಲಿ ಸಂಭ್ರಮವನ್ನುಕ್ಕಿಸಿತು. ಇದಕ್ಕೂ ಮೊದಲು ಜುಲೈ 15ರಂದು ನಿಗದಿಯಾಗಿದ್ದ ಚಂದ್ರಯಾನ-2ರ ಉಡಾವಣೆಯು ರಾಕೆಟ್ನಲ್ಲಿಯ ತಾಂತ್ರಿಕ ದೋಷದಿಂದಾಗಿ ಕ್ಷಣಗಣನೆ ಅಂತ್ಯಗೊಳ್ಳಲು 56 ನಿಮಿಷಗಳು ಬಾಕಿಯಿದ್ದಾಗ ರದ್ದುಗೊಳಿಸಲ್ಪಟ್ಟಿತ್ತು.
ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ನೇತೃತ್ವದಲ್ಲಿ ತದೇಕಚಿತ್ತದಿಂದ ಚಂದ್ರಯಾನ-2ರ ಉಡಾವಣೆಯನ್ನು ವೀಕ್ಷಿಸುತ್ತಿದ್ದ ವಿಜ್ಞಾನಿಗಳು ಬಾಹುಬಲಿಯ ಪಯಣ ನಿಗದಿತ ಕಾರ್ಯಕ್ರಮದಂತೆ ಪ್ರತಿಯೊಂದೂ ಮುಖ್ಯ ಹಂತವನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಂತೆ ಕರತಾಡನಗೈಯುತ್ತಿದ್ದರು.
ಯಶಸ್ವಿ ಉಡಾವಣೆಯನ್ನು ಪ್ರಕಟಿಸಿದ ಶಿವನ್, ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಮುನ್ನ ಮುಂದಿನ ಒಂದೂವರೆ ತಿಂಗಳಿನಲ್ಲಿ 15 ಅತ್ಯಂತ ನಿರ್ಣಾಯಕ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುವುದು. ಅದಾದ ಬಳಿಕ ಚಂದ್ರನ ಮೇಲೆ ಇಳಿಯುವ ಮುಹೂರ್ತ ಕೂಡಿ ಬರಲಿದೆ ಮತ್ತು ಅಂದು ಲ್ಯಾಂಡರ್ ‘ವಿಕ್ರಮ್’ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತ ಸಾಫ್ಟ್ ಲ್ಯಾಂಡಿಂಗ್ಗೆ ಪ್ರಯತ್ನಿಸಲಿದ್ದು,ಆ 15 ನಿಮಿಷಗಳು ನಮ್ಮ ಪಾಲಿಗೆ ಅತ್ಯಂತ ಆತಂಕಕಾರಿಯಾಗಲಿವೆ ಎಂದರು.
ಆರ್ಬಿಟರ್,ಲ್ಯಾಂಡರ್ ‘ವಿಕ್ರಮ್’ ಮತ್ತು ರೋವರ್ ‘ಪ್ರಜ್ಞಾನ್’ಅನ್ನು ಒಳಗೊಂಡಿರುವ ಅಂತರಿಕ್ಷ ನೌಕೆ ಚಂದ್ರಯಾನ-2 ಸೆಪ್ಟೆಂಬರ್ ಮೊದಲ ವಾರದಲ್ಲಿ ಚಂದ್ರನ ಅತ್ಯಂತ ಸಮೀಪಕ್ಕೆ ತಲುಪಲಿದೆ.
ಚಂದ್ರಯಾನ-2ನ್ನು ಇಸ್ರೋ ಸ್ಥಾಪನೆಯಾದಾಗಿನಿಂದ ಅದರ ಅತ್ಯಂತ ಸಂಕೀರ್ಣ ಮತ್ತು ಪ್ರತಿಷ್ಠಿತ ಅಭಿಯಾನವೆಂದು ಬಣ್ಣಿಸಲಾಗಿದೆ.
ಚಂದ್ರನ ದಕ್ಷಿಣ ಧ್ರುವದ ಸಮೀಪ ಸಾಫ್ಟ್ ಲ್ಯಾಂಡಿಂಗ್ಗೆ ನಾವು ಪ್ರಯತ್ನಿಸುತ್ತಿದ್ದು,ಚಂದ್ರಯಾನ-2 ತಂತ್ರಜ್ಞಾನದಲ್ಲಿ ಮುಂದಿನ ಜಿಗಿತವಾಗಿದೆ. ಸಾಫ್ಟ್ ಲ್ಯಾಂಡಿಂಗ್ ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದ್ದು,15 ನಿಮಿಷಗಳ ಕಾಲ ನಮ್ಮನ್ನು ತೀವ್ರ ಆತಂಕಕ್ಕೀಡು ಮಾಡಲಿದೆ ಎಂದು ಉಡಾವಣೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವನ್ ತಿಳಿಸಿದರು.
ಚಂದ್ರಯಾನ-2ರ ಜೊತೆಗೆ ಯುರೋಪಿನ ಮೂರು,ಅಮೆರಿಕದ ಎರಡು ಮತ್ತು ಬಲ್ಗೇರಿಯದ ಒಂದು ಉಪಗ್ರಹ ಸೇರಿದಂತೆ 13 ಪೇಲೋಡ್ಗಳು ಬಾಹುಬಲಿಯ ಒಡಲಿನಲ್ಲಿವೆ.
ದಕ್ಷಿಣ ಧ್ರುವವು ಚಂದ್ರನ ಉತ್ತರ ಧ್ರುವಕ್ಕಿಂತ ಹೆಚ್ಚು ನೆರಳಿನ ತಾಣವಾಗಿದೆ. ಇಂತಹ ಶಾಶ್ವತ ನೆರಳನ್ನು ಹೊಂದಿರುವ ಪ್ರದೇಶಗಳಲ್ಲಿ ನೀರಿನ ಅಸ್ತಿತ್ವದ ಸಾಧ್ಯತೆಯಿದೆ ಎಂದು ತಿಳಿಸಿರುವ ಇಸ್ರೋ, ದಕ್ಷಿಣ ಧ್ರುವ ಪ್ರದೇಶದಲ್ಲಿನ ಕುಳಿಗಳು ಶೀತಲವಾಗಿದ್ದು,ಆರಂಭಿಕ ಸೌರ ವ್ಯವಸ್ಥೆಯ ಪಳೆಯುಳಿಕೆ ದಾಖಲೆಗಳನ್ನು ಒಳಗೊಂಡಿವೆ ಎಂದು ಹೇಳಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯಿ ಅವರ ಸ್ಮರಣಾರ್ಥ ‘ವಿಕ್ರಮ್’
ಎಂದು ಹೆಸರಿಸಲಾಗಿರುವ ಲ್ಯಾಂಡರ್ ಚಂದ್ರನ ದಕ್ಷಿಣದಲ್ಲಿ ಸುಮಾರು 70 ಡಿಗ್ರಿ ಅಕ್ಷಾಂಶದಲ್ಲಿಯ ಎರಡು ಕುಳಿಗಳ ನಡುವಿನ ಸಮತಟ್ಟು ಪ್ರದೇಶದಲ್ಲಿ ಇಳಿಯಲಿದೆ. ಬಳಿಕ ಅದರೊಂದಿಗಿರುವ ಆರು ಚಕ್ರಗಳ ರೋಬೊಟಿಕ್ ವಾಹನ ‘ಪ್ರಜ್ಞಾನ ’ರೋವರ್ ಚಂದ್ರನ ಮೇಲ್ಮೈಯಲ್ಲಿನ ಮಾಹಿತಿಗಳನ್ನು ಸಂಗ್ರಹಿಸುವ ತನ್ನ ಕೆಲಸವನ್ನು ಆರಂಭಿಸಲಿದೆ.
►ಇದು ಚಂದ್ರನತ್ತ ಭಾರತದ ಐತಿಹಾಸಿಕ ಪಯಣದ ಆರಂಭವಾಗಿದೆ. ಹಿಂದಿನ ತಾಂತ್ರಿಕ ದೋಷದ ಬಳಿಕ ಪುಟಿದೆದ್ದು ಅದ್ಭುತ ಯಶಸ್ಸನ್ನು ಸಾಧಿಸಿದ್ದೇವೆ.
►ಇಸ್ರೋ ಅಧ್ಯಕ್ಷ ಕೆ.ಶಿವನ್
►ತನ್ನ ಮೊದಲ ಯಶಸ್ವಿ ಚಂದ್ರ ಅಭಿಯಾನ ‘ಚಂದ್ರಯಾನ-1’ರ 11 ವರ್ಷಗಳ ಬಳಿಕ ಇಸ್ರೋ ಭಾರೀ ಮಹತ್ವಾಕಾಂಕ್ಷೆಯೊಂದಿಗೆ 958 ಕೋ.ರೂ.ವೆಚ್ಚದಲ್ಲಿ ‘ಚಂದ್ರಯಾನ-2’ಕ್ಕೆ ಚಾಲನೆ ನೀಡಿದೆ. ಚಂದ್ರನಿಗೆ 3,400 ಪ್ರದಕ್ಷಿಣೆಗಳನ್ನು ಹಾಕುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದ ಚಂದ್ರಯಾನ-1 2009,ಆ.29ರವರೆಗೆ 312 ದಿನಗಳ ಕಾಲ ಕಾರ್ಯಾಚರಣೆಯಲ್ಲಿತ್ತು.
►ಭೂಕಕ್ಷೆಯಲ್ಲಿ ಸಾಗುವ ಅಂತರಿಕ್ಷ ನೌಕೆಯ ಕಕ್ಷೆಯನ್ನು ಅಂತಿಮವಾಗಿ 1.05 ಲಕ್ಷ ಕಿ.ಮೀಗೂ ಹೆಚ್ಚಿನ ಮಟ್ಟಕ್ಕೆ ಎತ್ತರಿಸಲಾಗುವುದು ಮತ್ತು ಅಲ್ಲಿಂದ ಅದು ಚಂದ್ರ ವರ್ಗಾವಣೆ ಪಥವನ್ನು ಪ್ರವೇಶಿಸಲಿದೆ. ಮುಂದಿನ ಎರಡು ದಿನಗಳಲ್ಲಿ ಅದು ಚಂದ್ರನ ಸಮೀಪಕ್ಕೆ ಸಾಗಲಿದೆ. ಮುಂದಿನ ಕೆಲವು ದಿನಗಳಲ್ಲಿ ಕ್ರಮೇಣ ಅದನ್ನು 100 100 ವೃತ್ತಾಕಾರದ ಕಕ್ಷೆಯಲ್ಲಿ ತರಲಾಗುವುದು. ಈ ಹಂತದಲ್ಲಿ ರೋವರ್ನ್ನು ತನ್ನೊಂದಿಗೆ ಹೊಂದಿರುವ ಲ್ಯಾಂಡರ್ ಅಂತರಿಕ್ಷ ನೌಕೆಯಿಂದ ಪ್ರತ್ಯೇಕಗೊಳ್ಳಲಿದೆ. ಮುಂದಿನ ಕೆಲವು ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಪರಿಭ್ರಮಿಸುವ ಅದು ಬಳಿಕ ಚಂದ್ರನ ದಕ್ಷಿಣ ಧ್ರುವದಲ್ಲಿಯ ಆಯ್ಕೆ ಮಾಡಿದ ತಾಣದಲ್ಲಿ ಇಳಿಯಲಿದೆ. ಇದು ಚಂದ್ರಯಾನ-2ರ ಅತ್ಯಂತ ಕಠಿಣ ಹಂತಗಳಲ್ಲೊಂದಾಗಿದೆ.
►ಇಸ್ರೋದ ಅತ್ಯಂತ ಬೃಹತ್ ಮತ್ತು ಶಕ್ತಿಶಾಲಿ ರಾಕೆಟ್ ಆಗಿರುವ ಜಿಎಸ್ಎಲ್ವಿ ಮಾರ್ಕ್ 43.43 ಮೀ.ಗಳಷ್ಟು ಅಂದರೆ 15 ಅಂತಸ್ತುಗಳ ಕಟ್ಟಡದಷ್ಟು ಎತ್ತರವನ್ನು ಹೊಂದಿದೆ. ಉಡಾವಣೆಗೆ 20 ಗಂಟೆಗಳ ಕ್ಷಣಗಣನೆ ರವಿವಾರ ಸಂಜೆ 6:43ಕ್ಕೆ ಆರಂಭಗೊಂಡಿತ್ತು.