ಕರ್ನಾಟಕದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮನವಿ ವಾಪಸ್ ಪಡೆಯಲು ಅನುಮತಿ ಸುಪ್ರೀಂ
ಹೊಸದಿಲ್ಲಿ, ಜು.25: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿರುವಂತೆ ವಿಶ್ವಾಸವ ಮತ ಯಾಚನೆಯನ್ನು ತಕ್ಷಣ ನಡೆಸುವಂತೆ ವಿಧಾನಸಭಾ ಸ್ಪೀಕರ್ ಕೆ.ಆರ್ ರಮೇಶ್ ಅವರಿಗೆ ನಿರ್ದೇಶ ನೀಡಬೇಕೆಂದು ಕೋರಿ ಕರ್ನಾಟಕದ ಇಬ್ಬರು ಸ್ವತಂತ್ರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲು ಸರ್ವೋಚ್ಚ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ.
ಮನವಿಯನ್ನು ಹಿಂಪಡೆಯಲು ನಮ್ಮ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪೀಕರ್ ಹಾಗೂ ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ಅವರ ಪರ ವಕೀಲರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಪೀಠ ಈ ಅನುಮತಿ ನೀಡಿದೆ. ಮಂಗಳವಾರ ಸಂಜೆ ವಿಶ್ವಾಸ ಮತ ಯಾಚನೆ ನಡೆದಿರುವುದರಿಂದ ಇನ್ನು ಈ ಅರ್ಜಿ ಅನೂರ್ಜಿತಗೊಳ್ಳುತ್ತದೆ ಎಂಬ ನೆಲೆಯಲ್ಲಿ ಸ್ವತಂತ್ರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲರಿಗೆ ನ್ಯಾಯಾಧೀಶರಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಸದಸ್ಯರಾಗಿರುವ ಪೀಠ ಸೂಚಿಸಿದೆ.
ಮನವಿಯನ್ನು ಹಿಂಪಡೆಯಲು ಕೋರುವ ಸಂದರ್ಭದಲ್ಲಿ ಹಾಜರಾಗದಿರುವ ಕಾರಣಕ್ಕೆ ಶ್ರೇಷ್ಠ ನ್ಯಾಯಾಲಯ ಹಿರಿಯ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ. ತುರ್ತು ವಿಚಾರಣೆ ಅಗತ್ಯವಿದ್ದಾಗ ನೀವು ನಮ್ಮ ಬಳಿ ರಾತ್ರಿಯಾಗಲೀ, ಹಗಲಾಗಲೀ ಅಥವಾ ಮಧ್ಯರಾತ್ರಿಯೇ ಆಗಲಿ ಬರುತ್ತೀರಿ. ಆದರೆ ನ್ಯಾಯಾಲಯಕ್ಕೆ ಸಲಹೆಯ ಅಗತ್ಯವಿರುವಾಗ ನೀವು ಇಲ್ಲಿರುವುದಿಲ್ಲ ಎಂದು ಪೀಠ ತನ್ನ ಆಕ್ರೋಶ ವ್ಯಕ್ತಪಡಿಸಿದೆ.