ಇನ್ನೊಮ್ಮೆ ಯುದ್ಧಕ್ಕೆ ಮುಂದಾದರೆ ಮುಖಭಂಗ ಎದುರಿಸಲಿದ್ದೀರಿ: ಪಾಕಿಸ್ತಾನಕ್ಕೆ ಸೇನಾ ವರಿಷ್ಠ ಬಿಪಿನ್ ರಾವತ್ ಎಚ್ಚರಿಕೆ
ದ್ರಾಸ್, ಜು. 26: ಭಾರತದೊಂದಿಗೆ ಇನ್ನೊಂದು ಬಾರಿ ಯುದ್ಧಕ್ಕೆ ಮುಂದಾದರೆ ತೀವ್ರ ಮುಖಭಂಗ ಎದುರಿಸಲಿದ್ದೀರಿ ಎಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಶುಕ್ರವಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
‘‘ಮತ್ತೆ ಭಾರತದೊಂದಿಗೆ ಯುದ್ಧಕ್ಕೆ ಮುದಾಗಬೇಡಿ. ಅಂತಹ ದುಸ್ಸಹಾಸವನ್ನು ಸಾಮಾನ್ಯವಾಗಿ ಯಾರೂ ಪುನಾರಾವರ್ತನೆ ಮಾಡುವುದಿಲ್ಲ. ಪುನರಾವರ್ತಿಸಿದರೆ ನೀವು ತೀವ್ರ ಮುಖಭಂಗ ಎದುರಿಸಬೇಕಾದೀತು’’ ಎಂದು ರಾವತ್ ಹೇಳಿದರು. ಅವರು ಕಾರ್ಗಿಲ್ ವಿಜಯ ದಿವಸ್ನ 20ನೆ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇನಾ ಶಸ್ತ್ರಾಸ್ತ್ರ ದಾಸ್ತಾನಿನ ಆಧುನಿಕೀಕರಣದ ಬಗ್ಗೆ ಮಾತನಾಡಿದ ರಾವತ್, ಈಗ ನಮ್ಮ ಗಮನ ಪಿರಂಗಿ ವ್ಯವಸ್ಥೆಯ ಕುರಿತು ಕೇಂದ್ರೀಕೃತವಾಗಿ ಎಂದರು.
‘‘ನಾವು ಶಸ್ತ್ರಾಸ್ತ್ರ ದಾಸ್ತಾನಿನ ಬಗ್ಗೆ ಎದುರು ನೋಡುತ್ತಿದ್ದೇವೆ. ಪಿರಂಗಿ ವ್ಯವಸ್ಥೆಯ ಬಗ್ಗೆ ಗಮನ ಕೇಂದ್ರೀಕರಿಸಿದ್ದೇವೆ. ಈಗ ನಮ್ಮ ದೇಶದಲ್ಲಿ ಉತ್ಪಾದಿಸುತ್ತಿರುವ ಹೋವಿಟ್ಜರ್, ಕೆ-9 ವಜ್ರ ಮೊದಲಾದ ಪಿರಂಗಿಗಳನ್ನು ನಾವು 2020ರ ಹೊತ್ತಿಗೆ ಪಡೆಯಲಿದ್ದೇವೆ. ಬೋಫರ್ಸ್ನಂತಹ ಎರಡು ಪಿರಂಗಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ’’ ಎಂದು ಅವರು ತಿಳಿಸಿದ್ದಾರೆ. ಗಡಿ ನಿಯಂತ್ರಣ ವಾಸ್ತವ ರೇಖೆಯಲ್ಲಿ ಶಾಂತಿ ನೆಲೆಸಿದೆ ಹಾಗೂ ಪರಿಸ್ಥಿತಿ ಹತೋಟಿಯಲ್ಲಿ ಇದೆ ಎಂದು ರಾವತ್ ಹೇಳಿದರು.