ಕಾಂಗ್ರೆಸ್ ನಾಯಕನ ವಿರುದ್ಧ ಐಟಿ ದಾಳಿ: 200 ಕೋ.ರೂ. ಮೌಲ್ಯದ ವಿದೇಶಿ ಸಂಪತ್ತು ಪತ್ತೆ
ಹೊಸದಿಲ್ಲಿ, ಜು.29: ಹರ್ಯಾಣ ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯಿ ಮತ್ತವರ ಕುಟುಂಬ ಸದಸ್ಯರಿಗೆ ಸೇರಿದ 13 ಕಡೆಗಳಲ್ಲಿ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು(ಐಟಿ) ರೂ.200 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ವಿದೇಶಿ ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ.
ಬಿಷ್ಣೋಯಿಗೆ ಸಂಬಂಧಿಸಿದಂತೆ ಹರ್ಯಾಣ, ದಿಲ್ಲಿ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ದಾಳಿಗಳು ನಡೆದಿದ್ದವು. ಸ್ಥಿರಾಸ್ತಿ ಖರೀದಿ ವ್ಯವಹಾರಗಳು ಹಾಗೂ ನಿರ್ಮಾಣ ಕ್ಷೇತ್ರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಗದು ಹಣ ವರ್ಗಾವಣೆಯಾಗಿರುವ ಬಗ್ಗೆ ಸಾಕ್ಷ್ಯಗಳು ಲಭಿಸಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಹೇಳಿಕೆಯಲ್ಲಿ ಯಾವುದೇ ಹೆಸರಿಲ್ಲದೇ ಇದ್ದರೂ ಹರ್ಯಾಣದ ಮಾಜಿ ಸಿಎಂ ಭಜನ್ ಲಾಲ್ ಅವರ ಪುತ್ರ ಕುಲದೀಪ್ ಬಿಷ್ಣೋಯಿಗೆ ಸಂಬಂಧಿಸಿದ ಪ್ರಕರಣ ಇದೆಂದು ಮೂಲಗಳು ತಿಳಿಸಿವೆ.
ಕುಲದೀಪ್ ಅವರು ಹರ್ಯಾಣಾದ ಆದಂಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರಿಗೆ ಸೇರಿದ ಸಂಪತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಪನಾಮಾ, ಇಂಗ್ಲೆಂಡ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನಗಳಲ್ಲಿ ದಶಕಗಳಿಂದ ಇವೆ ಎಂದು ತಿಳಿದು ಬಂದಿದೆ. ರೂ 200 ಕೋಟಿ ಮೌಲ್ಯದ ಅಕ್ರಮ ವಿದೇಶಿ ಸಂಪತ್ತು ಹೊಂದಿದ್ದ ಹೊರತಾಗಿ ಬಿಷ್ಣೋಯಿ ರೂ.30 ಕೋಟಿಯಷ್ಟು ತೆರಿಗೆ ವಂಚನೆಗೈದಿದ್ದಾರೆಂದೂ ಹೇಳಲಾಗಿದೆ.