ಕಾಂಗ್ರೆಸ್, ಎನ್ಸಿಪಿಯ ಕನಿಷ್ಠ 50 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಸಚಿವ ಮಹಾಜನ್
ಮುಂಬೈ, ಜು.29: ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಕ್ಕೆ ಸೇರಿರುವ ಕನಿಷ್ಠ 50 ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.
‘‘ಎನ್ಸಿಪಿಯ ಹಿರಿಯ ನಾಯಕಿ ಚಿತ್ರಾ ವಾಘ್ ತಿಂಗಳ ಹಿಂದೆಯೇ ಬಿಜೆಪಿ ಸೇರ್ಪಡೆಯಾಗುವ ಬಯಕೆ ವ್ಯಕ್ತಪಡಿಸಿದ್ದರು. ಎನ್ಸಿಪಿಯಲ್ಲಿ ತನಗೆ ಭವಿಷ್ಯವಿಲ್ಲ ಎಂದು ಅವರು ಭಾವಿಸಿದ್ದಾರೆ. ಅಸೆಂಬ್ಲಿ ಚುನಾವಣೆಗೆ ಮೊದಲು ಬಿಜೆಪಿಗೆ ಸೇರಲು ಬೇರೆ ಪಕ್ಷಗಳ ಹಲವು ಶಾಸಕರು ಮುಂದಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ತಮ್ಮ ಶಾಸಕರನ್ನು ಕಳೆದುಕೊಂಡು ದುರ್ಬಲವಾಗಲಿವೆ’’ ಎಂದು ಮಹಾಜನ್ ತಿಳಿಸಿದ್ದಾರೆ.
ಮುಂಬೈನ ಎನ್ಸಿಪಿ ಘಟಕದ ಸಚಿನ್ ಅಹಿರೆ ಕಳೆದ ವಾರ ಶಿವಸೇನೆಗೆ ಸೇರ್ಪಡೆಯಾಗಿದ್ದರು. ಎನ್ಸಿಪಿ ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾ ವಾಘ್ ಹಾಗೂ ಎನ್ಸಿಪಿ ಶಾಸಕ ವೈಭವ್ ಪಿಚಡ್ ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
Next Story