ಪತ್ರಕರ್ತನಿಗೆ ಗುಂಡಿಕ್ಕಿದ ಅಪರಿಚಿತ ದುಷ್ಕರ್ಮಿಗಳು
ಪಾಟ್ನ, ಜು.30: ರಾಷ್ಟ್ರಮಟ್ಟದ ಹಿಂದಿ ದಿನಪತ್ರಿಕೆಯೊಂದರ ಅರೆಕಾಲಿಕ ವರದಿಗಾರನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿರುವ ಪತ್ರಕರ್ತ ಈಗ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ಸರ್ಸೋಪಾಹಿ ಬಝಾರ್ನಲ್ಲಿ ಪತ್ರಕರ್ತ ಪ್ರದೀಪ್ ಮಂಡಲ್ ಮೇಲೆ ಬೈಕ್ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದರು. ಎರಡು ಗುಂಡೇಟು ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಮಂಡಲ್ನನ್ನು ತಕ್ಷಣ ದರ್ಭಾಂಗದ ಮೆಡಿಕಲ್ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈಗ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮಧುಬನಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಸತ್ಯಪ್ರಕಾಶ್ ಹೇಳಿದ್ದಾರೆ.
ದುಷ್ಕರ್ಮಿಗಳ ಗುರುತು ಪತ್ತೆಯಾಗಿದ್ದು ಅವರನ್ನು ಶೀಘ್ರ ಬಂಧಿಸಲಾಗುವುದು ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ಮಂಡಲ್ ದೇಹದಿಂದ ಒಂದು ಗುಂಡನ್ನು ಹೊರತೆಗೆಯಲಾಗಿದೆ. ಆದರೆ ಕಿಡ್ನಿಯ ಬಳಿ ಸಿಕ್ಕಿಹಾಕಿಕೊಂಡಿರುವ ಗುಂಡನ್ನು ಹೊರತೆಗೆಯುವುದು ಸವಾಲಿನ ಕಾರ್ಯವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.