‘ಅಣ್ಣಾ ಕ್ಯಾಂಟೀನ್’ ಮುಚ್ಚಿದ ಜಗನ್ ಸರಕಾರ
ಅಮರಾವತಿ, ಅ. 2: ಆಂಧ್ರಪ್ರದೇಶಾದ್ಯಂತ ಇದ್ದ ಬಡವರಿಗೆ ಹಾಗೂ ಮಧ್ಯಮವರ್ಗದವರಿಗೆ 5 ರೂಪಾಯಿಗೆ ಊಟ ನೀಡುತ್ತಿದ್ದ ಅಣ್ಣಾ ಕ್ಯಾಂಟೀನ್ ಅನ್ನು ಗುರುವಾರದಿಂದ ಮುಚ್ಚಲಾಗಿದೆ. ರಾಜ್ಯ ಸರಕಾರದ ಆದೇಶ ಅನುಸರಿಸಿ ಹೊರಗುತ್ತಿಗೆ ಸಂಸ್ಥೆ ಆಹಾರ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲ 204 ಕ್ಯಾಂಟೀನ್ಗಳು ಬಾಗಿಲೆಳೆದುಕೊಂಡಿವೆ.
ಆದರೆ, ಕ್ಯಾಂಟೀನ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿರ್ದಿಷ್ಟ ಬದಲಾವಣೆಯೊಂದಿಗೆ ಈ ಯೋಜನೆಯನ್ನು ಮರು ಆರಂಭಿಸಲಾಗುವುದು ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರಕಾರ ಭರವಸೆ ನೀಡಿದೆ. ಈ ಕ್ಯಾಂಟೀನ್ಗಳಿಗೆ ಆಹಾರ ತಯಾರಿಸಿ ಪೂರೈಕೆ ಮಾಡುವ ಅಕ್ಷಯ ಪಾತ್ರ ಬುಧವಾರ ರಾತ್ರಿ ಕೊನೆಯ ಬಾರಿ ಆಹಾರ ಪೂರೈಸಿದೆ. ಕ್ಯಾಂಟೀನ್ಗಳನ್ನು ಮುಚ್ಚಿರುವುದಕ್ಕೆ ಟಿಡಿಪಿಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಟ್ವಿಟ್ಟರ್ನಲ್ಲಿ ಜಗನ್ ಮೋಹನ್ ರೆಡ್ಡಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಕೀಯ ದ್ವೇಷದಿಂದ ಸರಕಾರ ಕ್ಯಾಂಟೀನ್ಗಳನ್ನು ಮುಚ್ಚಿಸಿದೆ ಎಂದು ಟಿಡಿಪಿ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಹೇಳಿದ್ದಾರೆ.