ಅತ್ಯಾಚಾರಕ್ಕೆ ಒಳಗಾದ ಅಂಗವಿಕಲೆ ಮೃತ್ಯು
ಜೈಪುರ: ದೇವಾಲಯ ದರ್ಶನಕ್ಕಾಗಿ ತಂದೆಯ ಜತೆ ಬಂದಿದ್ದ ಅಂಗವಿಕಲೆ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿ ಇಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಬೇರೆಯವರ ನೆರವಿಲ್ಲದೇ ನಡೆಯಲು ಅಶಕ್ತಳಾಗಿದ್ದ 15ರ ಬಾಲಕಿ ಮೂಗಿಯೂ ಆಗಿದ್ದಳು. ಹನುಮಾನ್ ದರ್ಶನದಿಂದ ಪುತ್ರಿಯ ಅಂಗವೈಕಲ್ಯ ವಾಸಿಯಾಗುತ್ತದೆ ಎಂಬ ಭರವಸೆಯಿಂದ ರಾಜಸ್ಥಾನದ ದವೂಸಾ ಜಿಲ್ಲೆಯ ಖ್ಯಾತ ಮೆಹಂದಿಪುರ ಬಾಲಾಜಿ ದರ್ಶನಕ್ಕಾಗಿ ತಂದೆ ಆಕೆಯನ್ನು ಕರೆ ತಂದಿದ್ದರು.
"ಆಕೆಯನ್ನು ಜುಲೈ 24ರಂದು ಇಲ್ಲಿಗೆ ಕರೆ ತರಲಾಗಿತ್ತು. ಅವರು ದೇವಸ್ಥಾನದಲ್ಲಿ ದರ್ಶನ ಪಡೆಯುವ ವೇಳೆ ಒಬ್ಬ ಯುವಕನ ಪರಿಚಯವಾಗಿತ್ತು. ಆ ಯುವಕ ಇವರಿಗೆ ನೆರವು ನೀಡುವ ನೆಪದಲ್ಲಿ ಸನಿಹವಾಗಿದ್ದ. 27ರಂದು ಬಾಲಕಿ ಅಸ್ವಸ್ಥಗೊಂಡಾಗ ಮಹೂವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು" ಎಂದು ಪೊಲೀಸರು ಹೇಳಿದ್ದಾರೆ.
ಆರೋಗ್ಯ ಕೇಂದ್ರದಿಂದ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಹಾಗೂ ಬಳಿಕ ಜೈಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ಜತೆಗೆ ಸ್ನೇಹ ಸಂಪಾದಿಸಿದ್ದ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿರಬೇಕು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.
ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಶಂಕಿತನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.