ಮಾಲೆಗಾಂವ್ ಸ್ಫೋಟ: ಪ್ರಜ್ಞಾ ಸಿಂಗ್ ವಿಚಾರಣೆಯ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧಕ್ಕೆ ಎನ್ಐಎ ಮನವಿ
‘ಮತೀಯ ಸೌಹಾರ್ದತೆಗೆ ಧಕ್ಕೆ’ ಎಂಬ ನೆಪ!
ಮುಂಬೈ, ಆ.3: ಭೋಪಾಲ ಸಂಸದೆ ಪ್ರಜ್ಞಾ ಸಿಂಗ್ ಹಾಗೂ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಪ್ರಮುಖ ಆರೋಪಿಗಳಾಗಿರುವ 2008 ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ದೊರಕುವ ‘ಅನಗತ್ಯ ಪ್ರಚಾರ ಮತೀಯ ಸೌಹಾರ್ದತೆಗೆ ಧಕ್ಕೆ' ತರುವ ಸಾಧ್ಯತೆಯಿದೆಯೆಂಬ ನೆಪವೊಡ್ಡಿ ಈ ಪ್ರಕರಣದ ವಿಚಾರಣೆಯನ್ನು ಕ್ಯಾಮರಾದೆದುರು ನಡೆಸುವಂತೆ ಹಾಗೂ ವಿಚಾರಣೆಯ ಕುರಿತು ವರದಿ ಮಾಡದಂತೆ ಮಾಧ್ಯಮಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರುವಂತೆ ಎನ್ ಐಎ ಕೋರಿದೆ.
ಪ್ರಕರಣವನ್ನು `ಸೂಕ್ಷ್ಮ' ಎಂದು ಬಣ್ಣಿಸಿದ ಎನ್ಐಎ, “ಪ್ರಕರಣದ ವಿಚಾರಣೆಗೆ ದೊರಕುವ ಅನಗತ್ಯ ಪ್ರಚಾರ ಅಂತಿಮವಾಗಿ ನ್ಯಾಯಯುತ ವಿಚಾರಣೆಗೆ ತೊಡಕಾಗಬಹುದು'' ಎಂದು ಹೇಳಿದೆ.
ಮುಸ್ಲಿಂ ಜಿಹಾದಿ ಚಟುವಟಿಕೆಗಳ ವಿರುದ್ಧ ಪ್ರತೀಕಾರ ತೀರಿಸಲು ಹಾಗೂ ಎರಡು ಸಮುದಾಯಗಳ ನಡುವೆ ಬಿರುಕು ಏರ್ಪಡಿಸಲು ಈ ಸ್ಫೋಟ ನಡೆಸಲಾಗಿತ್ತು. ಪ್ರಾಸಿಕ್ಯೂಶನ್ ಪ್ರಕಾರ ಮಾಲೆಗಾಂವ್ ನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರುವುದರಿಂದ ಸ್ಫೋಟಕ್ಕೆ ಆ ಸ್ಥಳವನ್ನು ಆರಿಸಲಾಗಿತ್ತು, ಆದುದರಿಂದ ಕ್ಯಾಮರಾದೆದುರು ವಿಚಾರಣೆ ನಡೆಸಬೇಕು ಹಾಗೂ ವಿಚಾರಣೆಯ ಮಾಹಿತಿಯನ್ನು ಪ್ರಕಟಿಸುವುದಕ್ಕೆ ನಿರ್ಬಂಧ ಹೇರಬೇಕು'' ಎಂದು ವಿಶೇಷ ಎನ್ಐಎ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಅಪೀಲಿನಲ್ಲಿ ಎನ್ಐಎ ತಿಳಿಸಿದೆ.
ಶುಕ್ರವಾರ ನಡೆದ ವಿಚಾರಣೆ ವೇಳೆ ಹನ್ನೆರಡು ಮಂದಿ ಆರೋಪಿಗಳಲ್ಲೊಬ್ಬನಾಗಿರುವ ಸಮೀರ್ ಕುಲಕರ್ಣಿ ಎನ್ಐಎ ಮನವಿಯನ್ನು ವಿರೋಧಿಸಿದರೂ ಇತರ ಆರೋಪಿಗಳು ಆಗಸ್ಟ್ 5ರಂದು ತಮ್ಮ ಪ್ರತಿಕ್ರಿಯೆ ನೀಡಲಿದ್ದು, ನ್ಯಾಯಾಲಯ ಅದೇ ದಿನ ಈ ನಿಟ್ಟಿನಲ್ಲಿ ತನ್ನ ಆದೇಶ ಹೊರಡಿಸಲಿದೆ.
ಕೃಪೆ: thewire.in