ಸೆಂಗಾರ್ನ ಆಯುಧ ಪರವಾನಿಗೆ ರದ್ದು
ಉನ್ನಾವೊ, ಆ. 3: ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೇಂಗಾರ್ ಅವರ ಎಲ್ಲ ಆಯುಧಗಳ ಪರವಾನಿಗೆಯನ್ನು ರದ್ದುಗೊಳಿಸಿ ಉನ್ನಾವೊ ಜಿಲ್ಲಾಡಳಿತ ಶನಿವಾರ ಆದೇಶ ನೀಡಿದೆ.
ಸೇಂಗಾರ್ ಹೆಸರಲ್ಲಿ ಸಿಂಗಲ್ ಬ್ಯಾರಲ್ ಗನ್, ರೈಫಲ್ ಹಾಗೂ ರಿವಾಲ್ವರ್ ಪರವಾನಿಗೆ ಇದೆ. ಈ ಮೂರು ಆಯುಧಗಳ ಪರವಾನಿಗೆಯನ್ನು ರದ್ದುಗೊಳಿಸಿ ಜಿಲ್ಲಾ ದಂಡಾಧಿಕಾರಿ ದೇವೇಂದರ್ ಕುಮಾರ್ ಪಾಂಡೆ ಆದೇಶ ನೀಡಿದ್ದಾರೆ. ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ಇರುವುದರಿಂದ ಆತನ ಶಸ್ತ್ರಾಸ್ತ ಪರವಾನಿಗೆಯನ್ನು ಇನ್ನಷ್ಟೇ ರದ್ದುಗೊಳಿಸಬೇಕಿದೆ. ಜಿಲ್ಲಾಡಳಿತ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದೆ ಎಂದು ಪಾಂಡೆ ಅವರು ಶುಕ್ರವಾರ ಹೇಳಿದ್ದರು.
ಆಯುಧಗಳ ಪರವಾನಿಗೆ ರದ್ದುಪಡಿಸುವುದು ನ್ಯಾಯಾಂಗದ ಕ್ರಮ. ಇಲ್ಲಿ ನಿಯಮಗಳನ್ನು ಅನುಸರಿಸಬೇಕಾದ ಅಗತ್ಯ ಇದೆ. ಕುಲದೀಪ್ ಸಿಂಗ್ ಸೆಂಗಾರ್ನ ಆಯುಧಗಳ ಪರವಾನಿಗೆ ರದ್ದುಗೊಳಿಸಬೇಕು ಎಂದು ನಾವು ಈಗಾಗೇಲೇ ವರದಿ ಸಲ್ಲಿಸಿದ್ದೇವೆ. ವಿಚಾರಣೆ ನಡೆದ ಬಳಿಕ ನ್ಯಾಯಾಲಯ ನಿಧಾರ್ರ ತೆಗೆದುಕೊಳ್ಳಲಿದೆ ಎಂದು ಪಾಂಡೆ ಹೇಳಿದ್ದರು.
ಟ್ರಕ್ ಚಾಲಕ, ಕ್ಲೀನರ್ 3 ದಿನ ಸಿಬಿಐ ಕಸ್ಟಡಿಗೆ
ಹೊಸದಿಲ್ಲಿ: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಕಾರಿಗೆ ಢಿಕ್ಕಿಯಾಗಿರುವ ಟ್ರಕ್ನ ಚಾಲಕ ಹಾಗೂ ಕ್ಲೀನರ್ನನ್ನು 3 ದಿನ ವಶದಲ್ಲಿ ಇರಿಸಿಕೊಳ್ಳಲು ಸಿಬಿಐ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದೆ. ನಿಗೂಢ ಅಪಘಾತಕ್ಕೆ ಕಾರಣವಾಗಿರುವ ಚಾಲಕ ಆಶಿಶ್ ಕುಮಾರ್ ಪಾಲ್ ಹಾಗೂ ಕ್ಲೀನರ್ ಮೋಹನ್ನನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಂದು ಚಕಿತಗೊಳಿಸುವ ಸತ್ಯ ಇಂದು ಬೆಳಗ್ಗೆ ಬಹಿರಂಗಗೊಂಡಿತ್ತು. ಅಪಘಾತದ ಸ್ಥಳದಿಂದ 20 ಕಿ.ಮೀ. ದೂರದಲ್ಲಿರುವ ರಾಯ್ಬರೇಲಿಯ ಲಾಲ್ಗಂಜ್ ಪ್ರದೇಶದಲ್ಲಿರುವ ಟೋಲ್ ಪ್ಲಾಝಾದ ಸಮೀಪ ಇರುವ ಸಿಸಿಟಿವಿಯಲ್ಲಿ ಟ್ರಕ್ನ ನಂಬರ್ ಪ್ಲೇಟ್ಗೆ ಕಪ್ಪು ಬಣ್ಣ ಬಳಿಯದಿರುವುದು ದಾಖಲಾಗಿದೆ. ಕಂತು ಕಟ್ಟುವುದರಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ಗೆ ಉದ್ದೇಶಪೂರ್ವಕ ವಾಗಿ ಕಪ್ಪು ಬಣ್ಣ ಬಳಿಯಲಾಗಿತ್ತು ಎಂದು ಈ ಹಿಂದೆ ಟ್ರಕ್ ಚಾಲಕ ದೇವೇಂದ್ರ ಸಿಂಗ್ ತಿಳಿಸಿದ್ದ. ಆದರೆ, ಅಪಘಾತ ನಡೆಯುವ ಕೆಲವೇ ಕ್ಷಣಗಳಿಗಿಂತ ಮುನ್ನ ಚಾಲಕ ನಂಬರ್ ಪ್ಲೇಟ್ಗೆ ಗ್ರೀಸ್ ಬಳಿದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.