ಮುಂಬೈ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಆರು ಮಂದಿ ಬಲಿ
ಮುಂಬೈ : ಮಹಾನಗರದಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಮಳೆ ಅಬ್ಬರಕ್ಕೆ ಆರು ಮಂದಿ ಬಲಿಯಾಗಿದ್ದಾರೆ. ಮಳೆಯಿಂದಾಗಿ ಕಾರ್ಗೊ ಶಿಪ್ ಹಾಗೂ ಕೇಂದ್ರೀಯ ರೈಲ್ವೆ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಎಂ.ವಿ.ನಂದ್ ಅಪರ್ಣಾ ಹೆಸರಿನ 13 ಸಿಬ್ಬಂದಿ ಇದ್ದ ಹಡಗು ಅರಬ್ಬೀ ಸಮುದ್ರದಲ್ಲಿ 125 ಕಿಲೋಮೀಟರ್ ದೂರದ ವಂಗಾವ್ನಲ್ಲಿ ಸಿಕ್ಕಿಹಾಕಿಕೊಂಡಿದೆ. ಮುಕ್ಯ ಹಾಗೂ ಹಾರ್ಬರ್ ಲೈನ್ನಲ್ಲಿ ಸಿಆರ್ ಸೇವೆಗಳನ್ನು ರದ್ದುಪಡಿಸಲಾಗಿದೆ. ಹಳಿಗಳ ಮೇಲೆ ನೀರು ನಿಂತಿದೆ. ಮುಂಬೈ ಷೇರು ವಿನಿಮಯ ಕೇಂದ್ರದ ಕಟ್ಟಡ ಇರುವ ದಲಾಲ್ಸ್ಟ್ರೀಟ್ ಕೂಡಾ ಪ್ರವಾಹದಿಂದ ಆವೃತ್ತವಾಗಿದ್ದು, ಉಪನಗರದ ಹಲವು ಕಡೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ರವಿವಾರ ಕೂಡಾ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಅಧಿಕಾರಿಗಳು ಸರ್ವಸನ್ನದ್ಧರಾಗುವಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಥಾಣೆ, ಪಾಲ್ಗಾರ್ ಮತ್ತು ರಾಯಗಢದಲ್ಲಿ ಕೂಡಾ ವ್ಯಾಪಕ ಮಳೆಯಾಗುವ ಬಗ್ಗೆ ಇಲಾಖೆ ಮುನ್ಸೂಚನೆ ನೀಡಿದೆ. ಕಲ್ಯಾಣ್, ವಸಾಯ್, ನಲಸೋಪಾರ ಮತ್ತು ವಿರಾರ್ಗಳಲ್ಲಿ ಕೂಡಾ ಭಾರೀ ಮಳೆಯಾಗಿದೆ.