ಶೋಪಿಯಾನ್ ಬೀದಿಯಲ್ಲಿ ಸ್ಥಳೀಯರೊಂದಿಗೆ ಊಟ ಮಾಡಿದ ಎನ್ಎಸ್ಎ ಅಜಿತ್ ದೋವಲ್
ಫೋಟೊ : ANI
ಶ್ರೀನಗರ, ಆ. 7: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂದೆಗೆತ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯದ ವಿಭಜನೆಯ ಎರಡು ಮಹತ್ವದ ನಿರ್ಧಾರಗಳನ್ನು ಲೋಕಸಭೆಯು ಮಂಗಳವಾರ ಅಂಗೀಕರಿಸಿದ ಬೆನ್ನಲ್ಲೇ ಬುಧವಾರ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರು ಕಣಿವೆಯ ಶೋಪಿಯಾನ್ ಜಿಲ್ಲೆಯಲ್ಲಿ ಸ್ಥಳೀಯರೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಊಟ ಮಾಡಿದರು.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರಕಾರವು ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸ್ಥಿತಿಯನ್ನು ಪರಿಶೀಲಿಸಲು ದೋವಲ್ ಭೇಟಿ ನೀಡಿದ್ದಾರೆ. ಕೇಂದ್ರದ ನಿರ್ಧಾರದ ಪರಿಣಾಮಗಳ ಕುರಿತು ಕಣಿವೆಯಲ್ಲಿ ಮನೆ ಮಾಡಿರುವ ಅನಿಶ್ಚಿತತೆಯ ನಡುವೆ ದೋವಲ್ ಸ್ಥಳೀಯರನ್ನು ತಲುಪಿದ್ದಾರೆ.
ಶೋಪಿಯಾನ್ ಜಿಲ್ಲೆ ಉಗ್ರರ ಚಟುವಟಿಕೆಗಳ ಬೀಡು ಎಂದು ಪರಿಗಣಿಸಲಾಗಿದ್ದು, 2016 ಜುಲೈನಲ್ಲಿ ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಭದ್ರತೆ ಪಡೆಗಳ ಗುಂಡೇಟಿಗೆ ಬಲಿಯಾದ ಬಳಿಕ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟಿತ್ತು. ಭಾರೀ ಹಿಂಸಾಚಾರ ಮತ್ತು ಕಲ್ಲು ತೂರಾಟಗಳಿಗೆ ಜಿಲ್ಲೆಯು ಸಾಕ್ಷಿಯಾಗಿತ್ತು. ಆದರೆ ಈ ಪ್ರದೇಶದಲ್ಲೀಗ ಸಹಜತೆ ಮತ್ತು ಶಾಂತಿ ಮರಳಿದೆ ಎಂದು ಹೇಳಲಾಗುತ್ತಿದೆ.
ಎಲ್ಲವೂ ಹೇಗಿದೆ ? ನೀವೆಲ್ಲ ಏನು ಭಾವಿಸುತ್ತಿದ್ದೀರಿ ಎಂಬ ದೋವಲ್ ಪ್ರಶ್ನೆಗೆ ಸ್ಥಳಿಯನೋರ್ವ, ಎಲ್ಲವೂ ಚೆನ್ನಾಗಿದೆ. ಇದೊಂದು ಅದ್ಭುತ ದಿನ ಎಂದು ಉತ್ತರಿಸುವುದು ಎಎನ್ಐ ವೀಡಿಯೊದಲ್ಲಿ ಕಾಣುತ್ತದೆ.
ಸ್ಥಳೀಯರ ಸುರಕ್ಷತೆ ಬಗ್ಗೆ ಅವರಿಗೆ ಭರವಸೆ ನೀಡಿದ ದೋವಲ್, ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರುವುದು ಸರಕಾರದ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.
ಉತ್ತಮ ಬದುಕಿಗಾಗಿ ಶಸ್ತ್ರಾಸ್ತ್ರಗಳು ಮತ್ತು ಬಂದ್ಗಳನ್ನು ತ್ಯಜಿಸುವಂತೆ ಹಾಗೂ ಶಾಂತಿಯನ್ನು ಅಪ್ಪಿಕೊಳ್ಳುವಂತೆ ದೋವಲ್ ಕಾಶ್ಮೀರದ ಜನತೆಯಲ್ಲಿ ಮನವಿ ಮಾಡಿಕೊಂಡರು.