ದೇವರು ಪಾಕಿಸ್ತಾನದಂತಹ ನೆರೆ ರಾಷ್ಟ್ರವನ್ನು ಯಾರಿಗೂ ನೀಡದಿರಲಿ: ರಾಜನಾಥ್ ಸಿಂಗ್
ಹೊಸದಿಲ್ಲಿ, ಆ.8: ಕಾಶ್ಮೀರ ಕುರಿತು ಕೇಂದ್ರ ಸರಕಾರದ ನಿರ್ಧಾರಗಳನ್ನು ಪ್ರತಿಭಟಿಸಿ ಭಾರತದೊಂದಿಗೆ ತನ್ನ ಸಂಬಂಧಗಳನ್ನು ಕಡಿದುಕೊಂಡಿರುವ ಪಾಕಿಸ್ತಾನವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಕಟುವಾಗಿ ಟೀಕಿಸಿದ್ದಾರೆ.
‘ನಮ್ಮ ಅತಿ ಹೆಚ್ಚಿನ ಆತಂಕವಿರುವುದು ನಮ್ಮ ನೆರೆರಾಷ್ಟ್ರದ ಬಗ್ಗೆಯೇ. ನೀವು ನಿಮ್ಮ ಸ್ನೇಹಿತರನ್ನು ಬದಲಿಸಬಹುದು,ಆದರೆ ನಿಮ್ಮ ನೆರೆಹೊರೆಯವರನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿಲ್ಲ. ದೇವರು ಇಂತಹ ನೆರೆ ರಾಷ್ಟ್ರವನ್ನು ಯಾರಿಗೂ ನೀಡದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ದಿಲ್ಲಿಯಲ್ಲಿ ಮಾಜಿ ಯೋಧರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಿಂಗ್ ಹೇಳಿದರು.
ಬುಧವಾರ ಇಸ್ಲಾಮಾಬಾದ್ನಲ್ಲಿಯ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ್ದ ಪಾಕಿಸ್ತಾನವು ಭಾರತದೊಂದಿಗೆ ತನ್ನ ಸಂಬಂಧಗಳ ಕಡಿತ ಮತ್ತು ದ್ವಿಪಕ್ಷೀಯ ವ್ಯಾಪಾರದ ಅಮಾನತು ಸೇರಿದಂತೆ ತನ್ನ ಐದಂಶಗಳ ಕಾರ್ಯಕ್ರಮವನ್ನು ಪ್ರಕಟಿಸಿತ್ತು.
*ಜಮ್ಮು-ಕಾಶ್ಮೀರ ಸಂಪೂರ್ಣ ನಿಷ್ಕ್ರಿಯ
ತನ್ಮಧ್ಯೆ ವಿಧಿ 370ನ್ನು ರದ್ದುಗೊಳಿಸಿರುವ ತನ್ನ ಕ್ರಮದ ವಿರುದ್ಧ ಯಾವುದೇ ಬಂಡಾಯವನ್ನು ತಡೆಯಲು ಸರಕಾರವು ಕೈಗೊಂಡಿರುವ ಅಭೂತಪೂರ್ವ ಬಂದೋಬಸ್ತ್ ಕ್ರಮಗಳಿಂದಾಗಿ ಗುರುವಾರವೂ ಜಮ್ಮು-ಕಾಶ್ಮೀರವು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ದೂರವಾಣಿ ಸೇವೆಗಳು ಮತ್ತು ಅಂತರ್ಜಾಲ ಸೇವೆಗಳು ಇನ್ನೂ ಸ್ಥಗಿತಗೊಂಡಿದ್ದು,ಹಿರಿಯ ಅಧಿಕಾರಿಗಳು ಸಂವಹನಕ್ಕೆ ಸ್ಯಾಟಲೈಟ್ ಫೋನ್ಗಳನ್ನು ಬಳಸುತ್ತಿದ್ದಾರೆ. ನಿರ್ಬಂಧಗಳನ್ನು ಯಾವಾಗ ಹಿಂದೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.