ಯುವತಿಯರ ಬಗ್ಗೆ ಖಟ್ಟರ್ ಹೇಳಿಕೆ ಆರೆಸ್ಸೆಸ್ ತರಬೇತಿಯ ಫಲ: ರಾಹುಲ್
ಹೊಸದಿಲ್ಲಿ, ಆ.10: ದುರ್ಬಲ, ದಯನೀಯ ಮತ್ತು ಅಸುರಕ್ಷಿತ ವ್ಯಕ್ತಿ ವರ್ಷಗಟ್ಟಲೆ ಆರೆಸ್ಸೆಸ್ನ ತರಬೇತಿ ಪಡೆದರೆ ಆತನ ಬುದ್ಧಿಶಕ್ತಿಯ ಮೇಲೆ ಎಂತಹ ಪರಿಣಾಮವಾಗುತ್ತದೆ ಎಂಬುದಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರ ಹೇಳಿಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
“ಈಗ ಕಾಶ್ಮೀರದ ಕನ್ಯೆಯರನ್ನು ವಿವಾಹವಾಗಬಹುದು ಎಂದು ಹರ್ಯಾಣದ ಕೆಲವು ಯುವಕರು ಖುಷಿಯಲ್ಲಿದ್ದಾರೆ ಎಂದು” ಖಟ್ಟರ್ ಶುಕ್ರವಾರ ಹೇಳಿಕೆ ನೀಡಿದ್ದರು. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಗ್ಗೆ ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಮನೋಹರಲಾಲ್ ಖಟ್ಟರ್ ಅವರ ಹೇಳಿಕೆ ಅತ್ಯಂತ ತುಚ್ಛ ಮತ್ತು ಖಂಡನಾರ್ಹ. ಪುರುಷರ ಸ್ವತ್ತಾಗಲು ಮಹಿಳೆಯರು ಆಸ್ತಿಯೇನಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಫತೇಹಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಖಟ್ಟರ್, ‘ಹುಡುಗಿಯರ ಸಂಖ್ಯೆ ಹುಡುಗರ ಸಂಖ್ಯೆಗಿಂತ ಕಡಿಮೆಯಾಗುತ್ತಿದೆ. ಈ ಹಿಂದೆ ನಾವು ಮದುವೆಯಾಗುವ ಹುಡುಗಿಯರಿಗಾಗಿ ಬಿಹಾರಕ್ಕೆ ಹೋಗಬೇಕಿತ್ತು. ಈಗ ಕಾಶ್ಮೀರದ ಹುಡುಗಿಯರನ್ನು ತರಬಹುದು ಎಂದು ನಮ್ಮ ಯುವಕರಿಗೆ ಖುಷಿಯಾಗಿದೆ’ ಎಂದು ಹೇಳಿದ್ದರು.