ಚರಕ ಋಷಿ ಪರಮಾಣು ಸಂಶೋಧಕ ಎಂದ ಕೇಂದ್ರ ಸಚಿವ ಪೊಖ್ರಿಯಾಲ್
ಮುಂಬೈ, ಆ.11: "ಆಯುರ್ವೇದ ಶಾಸ್ತ್ರದ ಜನಕ ಎನಿಸಿಕೊಂಡಿರುವ ಚರಕ ಋಷಿ ಪರಮಾಣು ಹಾಗೂ ಕಣಗಳನ್ನು ಕೂಡಾ ಸಂಶೋಧಿಸಿದ್ದರು. ನಡೆದಾಡುವ ಕಂಪ್ಯೂಟರ್ ಏನಾದರೂ ಸೃಷ್ಟಿಯಾದರೆ ಅದು ಮೂಲಭೂತವಾಗಿ ಸಂಸ್ಕೃತದ ನೆರವಿನಿಂದ ಎನ್ನುವುದನ್ನು ನಾಸಾ ಕೂಡಾ ದೃಢಪಡಿಸಿದೆ"… ಇದು ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರ ಮಾತುಗಳು.
ಮುಂಬೈ ಐಐಟಿಯ 57ನೇ ಘಟಿಕೋತ್ಸವ ಭಾಷಣದಲ್ಲಿ, "ಸುಶ್ರುತ ಈ ವಿಶ್ವದ ಮೊಟ್ಟಮೊದಲ ಶಸ್ತ್ರಚಿಕಿತ್ಸಕ" ಎಂದು ಬಣ್ಣಿಸಿದರು. ಆದರೆ ಪರಮಾಣು ಸಿದ್ಧಾಂತವನ್ನು ಮೊದಲು ಪ್ರತಿಪಾದಿಸಿದವರು ಗ್ರೀಕ್ ತತ್ವಜ್ಞಾನಿ ಡೆಮೋಕ್ರಿಟಸ್.
"ನಡೆದಾಡುವ ಕಂಪ್ಯೂಟರ್ ಅಭಿವೃದ್ಧಿಪಡಿಸುವ ಕನಸು ನನಸಾಗುವುದಾದರೆ ಅದು ಸಂಸ್ಕೃತದ ಮೂಲತತ್ವದಿಂದಷ್ಟೇ ಸಾಧ್ಯ ಎನ್ನುವುದನ್ನು ನಾಸಾ ದೃಢಪಡಿಸಿದೆ. ಸಂಸ್ಕೃತ ವೈಜ್ಞಾನಿಕ ಭಾಷೆಯಾಗಿದ್ದು, ಬೇರೆ ಯಾವ ಭಾಷೆಯನ್ನೂ ಇದಕ್ಕೆ ಹೋಲಿಸಲಾಗದು" ಎಂದರು. ಈ ಭಾಷೆಯಲ್ಲಿ ಮಾತ್ರ ಹೇಗೆ ಮಾತನಾಡುತ್ತೇವೆಯೋ ಹಾಗೆಯೇ ಶಬ್ದಗಳನ್ನು ಬರೆಯಲಾಗುತ್ತದೆ ಎನ್ನುವುದು ಸಚಿವರ ವಿಶ್ಲೇಷಣೆ.
ಆಯುರ್ವೇದ ಹೊರತಾದ ವೈದ್ಯ ವ್ಯವಸ್ಥೆ ಅಪೂರ್ಣ. ವಿಶ್ವಾದ್ಯಂತ ಆಯುಷ್ ಘಟಕ ಆರಂಭಿಸದೇ ಯಾವ ಆಸ್ಪತ್ರೆಯನ್ನೂ ಆರಂಭಿಸಲಾಗದು. ಏಕೆಂದರೆ ಆಯುರ್ವೇದ ಇಲ್ಲದ ವೈದ್ಯ ವ್ಯವಸ್ಥೆ ಅಪೂರ್ಣ ಎಂದು ಬಣ್ಣಿಸಿದರು.