ಬಿಹಾರದ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ನಿಧನ
ಹೊಸದಿಲ್ಲಿ, ಆ.19: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಧುರೀಣ ಜಗನ್ನಾಥ್ ಮಿಶ್ರಾ (82) ಇಂದು ಬೆಳಗ್ಗೆ ಹೊಸದಿಲ್ಲಿಯಲ್ಲಿ ನಿಧನರಾದರು.
ಮಿಶ್ರಾ ಅವರು ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು, ಬಳಿಕ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಮೂರು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು . ಪ್ರಸ್ತುತ ಅವರು ಭಾರತೀಯ ಜನ ಕಾಂಗ್ರೆಸ್ (ರಾಷ್ಟ್ರೀಯ) ಸದಸ್ಯರಾಗಿದ್ದರು.
ಮಿಶ್ರಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದಾರೆ.
"ಜಗನ್ನಾಥ್ ಮಿಶ್ರಾ ಶಿಕ್ಷಣ ತಜ್ಞರಾಗಿದ್ದರು. ಅವರು ಬಿಹಾರ ಮತ್ತು ಭಾರತದ ರಾಜಕೀಯ ರಂಗಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರ ನಿಧನ ರಾಜಕೀಯ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವಾಗಿದೆ" ಎಂದು ನಿತೀಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಿಶ್ರಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ರಾಜ್ಯ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು.
ಕಳೆದ ವರ್ಷ ಜಗನ್ನಾಥ ಮಿಶ್ರಾ ಅವರನ್ನು ವಿವಾದಾತ್ಮಕ ಮೇವು ಹಗರಣ ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.