ಕಾಶ್ಮೀರ ವಿವಾದದಲ್ಲಿ ನೀರು ಅಸ್ತ್ರವಾಗಿ ಬಳಕೆ: ಪಾಕ್ ಹೇಳಿಕೆ ತಿರಸ್ಕರಿಸಿದ ಭಾರತ
ಹೊಸದಿಲ್ಲಿ, ಆ.20: ಗಡಿಭಾಗದಲ್ಲಿ ನೆರೆ ಸೃಷ್ಟಿಸಬಹುದಾದ ಅಣೆಕಟ್ಟಿನಿಂದ ನೀರನ್ನು ಬಿಡುಗಡೆಗೊಳಿಸುತ್ತಿರುವ ಬಗ್ಗೆ ಭಾರತ ತನಗೆ ಪೂರ್ವಮಾಹಿತಿ ನೀಡಿಲ್ಲ ಎಂದು ಪಾಕಿಸ್ತಾನ ನೀಡಿರುವ ಹೇಳಿಕೆಯನ್ನು ಭಾರತ ನಿರಾಕರಿಸಿದೆ.
ಭಾರತ ಐದನೇ ತಲೆಮಾರಿನ ಯುದ್ಧದಲ್ಲಿ ತೊಡಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹರಿಯುವ ಸಟ್ಲೇಜ್ ನದಿಯ ನೀರನ್ನು ಅನಿರೀಕ್ಷಿತವಾಗಿ ಬಿಡುಗಡೆಗೊಳಿಸುವ ಮೂಲಕ ಉಭಯ ದೇಶಗಳ ಮಧ್ಯೆ ಸುದೀರ್ಘ ಅವಧಿಯಿಂದ ಕಾಪಾಡಿಕೊಂಡು ಬರಲಾಗಿರುವ ಇಂಡಸ್ ಜಲ ಒಪ್ಪಂದವನ್ನು ಭಾರತ ಉಲ್ಲಂಘಿಸಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಇದಕ್ಕೆ ಉತ್ತರಿಸಿರುವ ಭಾರತ, ಜಲಾಶಯಗಳು ಮತ್ತು ನದಿಗಳಿಂದ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾದ ನೀರು ಇನ್ನೊಂದು ದೇಶಕ್ಕೆ ಹಾನಿಯುಂಟು ಮಾಡಬಹುದಾದ ಸಂದರ್ಭದಲ್ಲಿ ಮಾತ್ರ ಪೂರ್ವ ಮಾಹಿತಿ ನೀಡಬೇಕು ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಸದ್ಯ ಭಾರತದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯ ಈ ದಿನಗಳಲ್ಲಿ ಈವರೆಗೂ ಆ ರೀತಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಜಲ ಸಂಪನ್ಮೂಲ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ. ಭಾರತ ನೀರನ್ನು ಅಸ್ತ್ರವಾಗಿ ಬಳಸುವ ಮೂಲಕ ಪಾಕಿಸ್ತಾನವನ್ನು ಆರ್ಥಿಕವಾಗಿ ಉಸಿರುಗಟ್ಟಿಸಲು ಪ್ರಯತ್ನಿಸುತ್ತಿದೆ. ಅವರು ನಮ್ಮ ವಿರುದ್ಧ ಐದನೇ ತಲೆಮಾರಿನ ಯುದ್ಧವನ್ನು ಸಾರಲು ಬಯಸಿದ್ದಾರೆ ಎಂದು ಪಾಕಿಸ್ತಾನದ ಜಲ ಮತ್ತು ಇಂಧನ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಮುಝಮ್ಮಿಲ್ ಹುಸೈನ್ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.