ಸಿಜೆಐ ರಂಜನ್ ಗೊಗೊಯಿ ವಿರುದ್ಧ ಸಂಚು ಆರೋಪ: ತನಿಖೆ ಪೂರ್ಣಗೊಳಿಸಿದ ನ್ಯಾ ಪಟ್ನಾಯಕ್
ಹೊಸದಿಲ್ಲಿ, ಆ.21: ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿಯವರ ಮೇಲೆ ಆರೋಪ ಹೊರಿಸುವ ‘ವಿಸ್ತೃತ ಸಂಚಿನ’ ತನಿಖೆಯನ್ನು ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎ.ಕೆ ಪಟ್ನಾಯಕ್ ಅವರ ಏಕಸದಸ್ಯ ಸಮಿತಿ ಪೂರ್ಣಗೊಳಿಸಿದ್ದು, ಸೆಪ್ಟೆಂಬರ್ ಮಧ್ಯದಲ್ಲಿ ತನ್ನ ವರದಿಯನ್ನು ಒಪ್ಪಿಸುವ ಸಾಧ್ಯತೆಯಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಪೀಠಗಳ ನಗದಿಪಡಿಸುವಲ್ಲಿ ತಾರತಮ್ಯ ಸೇರಿದಂತೆ ಗೊಗೊಯಿ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ್ದ ನ್ಯಾಯವಾದಿ ಉತ್ಸವ್ ಸಿಂಗ್ ಬೈನ್ಸ್ ಅವರನ್ನು ಪಟ್ನಾಯಕ್ ವಿಚಾರಣೆ ನಡೆಸಿದರು. ತನಿಖೆಯ ಸಂದರ್ಭದಲ್ಲಿ ಬೈನ್ಸ್ ಸಲ್ಲಿಸಿದ್ದ ಅಫಿಡವಿಟ್ ಹಾಗೂ ಇತರ ದಾಖಲೆಗಳನ್ನು ಅವರು ಪರಿಶೀಲಿಸಿದರು. ಸದ್ಯ ಸಮಿತಿಯು ಈ ವಿಚಾರಣೆಯ ವರದಿಯನ್ನು ಸಿದ್ಧಪಡಿಸುತ್ತಿದ್ದು ಸೆಪ್ಟೆಂಬರ್ ಮಧ್ಯದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹಸ್ತಾಂತರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯವಾದಿ ಬೈನ್ಸ್ ಮಾಡುತ್ತಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಎಪ್ರಿಲ್ 25ರಂದು ಶ್ರೇಷ್ಟ ನ್ಯಾಯಾಲಯ ಸಮಿತಿಯನ್ನು ರಚಿಸಿತ್ತು. ಆದರೆ ಈ ವಿಚಾರಣೆಯಲ್ಲಿ ಗೊಗೊಯಿ ವಿರುದ್ಧ ಮಹಿಳೆಯೊಬ್ಬರು ಹೊರಿಸಿರುವ ಲೈಂಗಿಕ ಕಿರುಕುಳ ಆರೋಪ ಸೇರಿರುವುದಿಲ್ಲ ಎಂದು ನ್ಯಾಯಾಧೀಶ ಅರುಣ್ ಮಿಶ್ರಾ ನೇತೃತ್ವದ ವಿಶೇಷ ಪೀಠ ತಿಳಿಸಿದೆ.