Big Breaking News: ಹಿರಿಯ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ
ಹೊಸದಿಲ್ಲಿ,ಆ.24 : ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಶನಿವಾರ ನಿಧನರಾಗಿದ್ದಾರೆ. ಅಸ್ವಸ್ಥತೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜೇಟ್ಲಿ ಅವರನ್ನು ಕಳೆದ ಆಗಸ್ಟ್ 9ರಂದು ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಕೇಂದ್ರ(ಏಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬಹುಅಂಗಗಳ ವೈಫಲ್ಯತೆಗೆ ಒಳಗಾದ ಅವರು ಮಧ್ಯಾಹ್ನ 12.07ರ ಹೊತ್ತಿಗೆ ಕೊನೆಯುಸಿರೆಳೆದರು ಎಂದು ಏಮ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಗೌರವಾನ್ವಿತ ಸಂಸದ ಮತ್ತು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ನಿಧನ ಹೊಂದಿದ್ದಾರೆ ಎಂದು ಅತ್ಯಂತ ದುಃಖದಿಂದ ತಿಳಿಸುತ್ತಿದ್ದೇವೆ. ಅವರನ್ನು ಆಗಸ್ಟ್ 9ರಂದು ಏಮ್ಸ್ಗೆ ದಾಖಲಿಸಲಾಗಿತ್ತು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು” ಎಂದು ಏಮ್ಸ್ ಪ್ರಕಟನೆಯಲ್ಲಿ ತಿಳಿಸಿದೆ.
ಜೇಟ್ಲಿಯವರ ಅಂತ್ಯಕ್ರಿಯೆಯನ್ನು ರವಿವಾರ ದಿಲ್ಲಿಯ ಯಮುನಾ ನದಿ ದಡದಲ್ಲಿರುವ ನಿಗಮ್ಬೋಧ್ ಘಾಟ್ನಲ್ಲಿ ನಡೆಸಲಾಗುವುದು ಎಂದು ಬಿಜೆಪಿ ನಾಯಕ ಸುದಾಂಶು ಮಿತ್ತಲ್ ತಿಳಿಸಿದ್ದಾರೆ. 1991ರಿಂದಲೇ ಬಿಜೆಪಿಯ ರಾಷ್ಟ್ರೀಯ ನಾಯಕರಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದ ಜೇಟ್ಲಿ ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲಿ ವಿತ್ತ ಹಾಗೂ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅನಾರೋಗ್ಯದ ಕಾರಣದಿಂದಾಗಿ ಜೇಟ್ಲಿ, ಎರಡನೆ ಅವಧಿಯ ಮೋದಿ ಸಂಪುಟದಲ್ಲಿ ಸೇರ್ಪಡೆಗೊಳ್ಳಲು ನಿರಾಕರಿಸಿದ್ದರು. ಜೇಟ್ಲಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 2018ರಲ್ಲಿ ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಜೇಟ್ಲಿ ತನ್ನನ್ನು ಬಾಧಿಸಿದ್ದ ಮಧ್ವಸ್ತಿ (ಸಾಫ್ಟ್ಟಿಶ್ಯೂ)ಯ ಕ್ಯಾನ್ಸರ್ ಕಾಯಿಲೆಗಾಗಿ ಈ ವರ್ಷದ ಜನವರಿಯಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರು.
ದೀರ್ಘ ಸಮಯದಿಂದ ಮಧುಮೇಹದಿಂದ ಬಳಲುತ್ತಿದ್ದುದರಿಂದ ಜೇಟ್ಲಿ ಅವರನ್ನು ಬೊಜ್ಜಿನ ಸಮಸ್ಯೆ ಕೂಡಾ ಕಾಡಿತ್ತು. ಇದಕ್ಕಾಗಿ ಅವರು 2014ರಲ್ಲಿ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ (ಬೆರಿಯಾಟ್ರಿಕ್ ಸರ್ಜರಿ)ಗೆ ಒಳಗಾಗಿದ್ದರು.
ಮೋದಿ ಸರಕಾರದ ಟ್ರಬಲ್ಶೂಟರ್ ಎಂದೇ ಕರೆಸಿಕೊಳ್ಳುತ್ತಿದ್ದ ಜೇಟ್ಲಿ ಅವರು ಪತ್ನಿ ಸಂಗೀತಾ, ಪುತ್ರ ರೋಹನ್ ಹಾಗೂ ಪುತ್ರಿ ಸೋನಾಲಿ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಜೇಟ್ಲಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ.
ಜೇಟ್ಲಿಯವರ ಪಾರ್ಥಿವ ಶರೀರವನ್ನು ಏಮ್ಸ್ನಿಂದ ಅವರ ದಿಲ್ಲಿ ನಿವಾಸಕ್ಕೆ ರವಾನಿಸಲಾಗಿದ್ದು ಅಲ್ಲಿ ರವಿವಾರ ಬೆಳಿಗ್ಗೆ 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಂತರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಂತಿಮ ಗೌರವ ಸಲ್ಲಿಸಲು ಅವಕಾಶ ನೀಡಲಾಗುವುದು. ಸಂಜೆ ಐದು ಗಂಟೆಗೆ ಮೆರವಣಿಗೆಯ ಮೂಲಕ ಮೃತದೇಹವನ್ನು ದಿಲ್ಲಿಯ ನಿಗಮ್ಬೋಧ್ ಘಾಟ್ ಸಾಗಿಸಿ ಅಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
ಜೇಟ್ಲಿ ಕರ್ನಾಟಕ ನಂಟು
ಹೊಸದಿಲ್ಲಿ, ಆ.24: 2004ರಲ್ಲಿ ಅರುಣ್ ಜೇಟ್ಲಿಯವರನ್ನು ಕರ್ನಾಟಕ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಆ ವರ್ಷ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಏಕಕಾಲದಲ್ಲಿ ನಡೆದಿತ್ತು. ಅರುಣ್ ಜೇಟ್ಲಿ ಮತ್ತು ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ವಿಧಾನಸಭೆಯಲ್ಲಿ 79 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಮತ್ತು 26 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.