ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ವಿರೋಧ: ತನ್ನ ಹುದ್ದೆಗೆ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ
ಕೇರಳ ಪ್ರವಾಹ ಸಂದರ್ಭದ ‘ಹೀರೋ’ ಕಣ್ಣನ್ ಗೋಪಿನಾಥನ್
ತಿರುವನಂತಪುರ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರದ ಸರಕಾರ ಅಮಾನತು ಮಾಡಿರುವುದನ್ನು ಪ್ರತಿಭಟಿಸಿ ಕೇರಳದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
2018ರ ಆಗಸ್ಟ್ನಲ್ಲಿ ನೆರೆ ಪರಿಹಾರ ಚಟುವಟಿಕೆಗಳಲ್ಲಿ ಅನಾಮಧೇಯರಾಗಿ ಸೇವೆ ಸಲ್ಲಿಸಿ ಸುದ್ದಿ ಮಾಡಿದ್ದ ಕಣ್ಣನ್ ಗೋಪಿನಾಥನ್ ಹೀಗೆ ವಿಶಿಷ್ಟ ಪ್ರತಿಭಟನೆ ನಡೆಸಿದ ಅಧಿಕಾರಿ.
2012ನೇ ಬ್ಯಾಚ್ ಅರುಣಾಚಲ ಪ್ರದೇಶ, ಗೋವಾ, ವಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೇಡರ್ನ ಅಧಿಕಾರಿಯಾಗಿರುವ ಗೋಪಿನಾಥನ್ ತಮ್ಮ ರಾಜೀನಾಮೆ ಪತ್ರವನ್ನು ಶುಕ್ರವಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
2018ರಲ್ಲಿ ಕೇರಳದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದಾಗ ಅನಾಮಧೇಯರಾಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇವರನ್ನು ಎರ್ನಾಕುಲಂ ಜಿಲ್ಲಾಧಿಕಾರಿ ಕೆ.ಮೊಹ್ಮದ್ ವೈ.ಸೈಫುಲ್ಲಾ ಗುರುತಿಸಿದ್ದರು. ಆದರೆ ಈ ಸ್ವಯಂಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡ ಗೋಪಿನಾಥನ್ಗೆ ಪ್ರವಾಸದ ವರದಿ ಸಲ್ಲಿಸದ ಕಾರಣಕ್ಕೆ ಶೋಕಾಸ್ ನೋಟಿಸ್ ನೀಡಲಾಗಿತ್ತು.
ಭವಿಷ್ಯದ ಯೋಜನೆ ಬಗ್ಗೆ ಗೋಪಿನಾಥನ್ ಯಾವುದೇ ನಿರ್ಧಾರ ಮಾಡಿಲ್ಲ. "ಮುಂದೆ ಏನು ಮಾಡಬೇಕು ಎಂಬ ಬಗ್ಗೆ ನಾನು ಚಿಂತಿಸಿಲ್ಲ. ಸದ್ಯಕ್ಕೆ ನನ್ನ ಗುರಿ ವ್ಯವಸ್ಥೆಯಿಂದ ಹೊರಬರುವುದು" ಎಂದು ಹೇಳಿದ್ದಾರೆ.