"ಆರ್ ಬಿಐನಿಂದ ಕದ್ದು ಏನನ್ನೂ ಸಾಧಿಸಲಾಗದು'': ಕೇಂದ್ರದ ವಿರುದ್ಧ ರಾಹುಲ್ ಆಕ್ರೋಶ
ಹೊಸದಿಲ್ಲಿ, ಆ.27: ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರಕಾರಕ್ಕೆ ದಾಖಲೆ 1.76 ಲಕ್ಷ ಕೋಟಿ ರೂಪಾಯಿ ವರ್ಗಾವಣೆಗೊಳಿಸಲು ಕೈಗೊಂಡ ನಿರ್ಧಾರದ ಹಿನ್ನೆಲೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ, ಇಂತಹ ಒಂದು ಕ್ರಮ “ ಆರ್ ಬಿಐನಿಂದ ಹಣ ಕದ್ದಂತೆಯೇ ಆಗಿದೆ'' ಎಂದಿದ್ದಾರೆ.
``ಪ್ರಧಾನಿ ಹಾಗೂ ವಿತ್ತ ಸಚಿವರಿಗೆ ತಾವೇ ಸೃಷ್ಟಿಕರ್ತರಾಗಿರುವ ಈ ಆರ್ಥಿಕ ಅಧಃಪತನವನ್ನು ಹೇಗೆ ಪರಿಹರಿಸುವುದೆಂದು ತಿಳಿಯದಾಗಿದೆ. ಆರ್ ಬಿಐನಿಂದ ಕದಿಯುವುದರಿಂದ ಏನನ್ನೂ ಸಾಧಿಸಲಾಗದು, ಅದು ಡಿಸ್ಪೆನ್ಸರಿಯಿಂದ ಬ್ಯಾಂಡೇಡ್ ಕದ್ದು ಗುಂಡಿನ ಗಾಯಕ್ಕೆ ಅಂಟಿಸಿದಂತಾಗಿದೆ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
``ಸರಕಾರಕ್ಕೆ ಆರ್ಬಿಐ ನೀಡಿದ ರೂ 1.76 ಲಕ್ಷ ಕೋಟಿ, ಬಜೆಟ್ 2019ರಲ್ಲಿ ನಾಪತ್ತೆಯಾಗಿದ್ದ ಮೊತ್ತಕ್ಕೆ ಸಮನಾಗಿದೆ. ಆ ಹಣ ಎಲ್ಲಿ ಖರ್ಚಾಯಿತು ?, ಅದೇಕೆ ಬಜೆಟ್ ನಿಂದ ನಾಪತ್ತೆಯಾಗಿತ್ತು ? ಈ ರೀತಿ ಆರ್ಬಿಐಯನ್ನು ಲೂಟಿ ಮಾಡಿದರೆ ಅದು ದೇಶದ ಆರ್ಥಿಕತೆಯನ್ನು ಇನ್ನಷ್ಟು ಹಾನಿಗೈಯ್ಯುವುದು ಹಾಗೂ ಬ್ಯಾಂಕಿನ ಕ್ರೆಡಿಟ್ ರೇಟಿಂಗ್ ಕಡಿಮೆಗೊಳಿಸುವುದು'' ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.