370ನೇ ವಿಧಿ ರದ್ದು: ವಿಶ್ವಸಂಸ್ಥೆಗೆ ಪಾಕ್ ಬರೆದ ಪತ್ರದಲ್ಲಿ ಬಿಜೆಪಿಯ ಖಟ್ಟರ್, ಸೈನಿ ಹೇಳಿಕೆಗಳು ಉಲ್ಲೇಖ!
ಹೊಸದಿಲ್ಲಿ, ಆ.29: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ ವಿಧಿ ರದ್ದುಗೊಳಿಸಿದ ನಂತರ ಅಲ್ಲಿ ಹೇರಲಾಗಿರುವ ಅಭೂತಪೂರ್ವ ನಿರ್ಬಂಧಗಳಿಂದ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪವಷ್ಟೇ ವಿಶ್ವಸಂಸ್ಥೆಗೆ ಪಾಕಿಸ್ತಾನ ಬರೆದ ಪತ್ರದಲ್ಲಿ ಉಲ್ಲೇಖಗೊಂಡಿಲ್ಲ. ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹಾಗೂ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಕಾಶ್ಮೀರಿ ಮಹಿಳೆಯರ ಕುರಿತಂತೆ ನೀಡಿದ ಹೇಳಿಕೆಗಳೂ ಪತ್ರದಲ್ಲಿ ಉಲ್ಲೇಖಗೊಂಡಿವೆ.
“ಯುದ್ಧದ ಶಸ್ತ್ರವಾಗಿ ಲಿಂಗಾಧರಿತ ಹಿಂಸೆ'' ಎಂಬ ವಿಭಾಗದ ಪತ್ರದಲ್ಲಿ ಸೈನಿ ಕಾಣಿಸಿಕೊಂಡಿದ್ದ ವೀಡಿಯೋ ಉಲ್ಲೇಖಿಸಲಾಗಿದೆ “ಪಕ್ಷದ ಮುಸ್ಲಿಂ ಕಾರ್ಯಕರ್ತರು ಸಂಭ್ರಮಿಸಬೇಕು. ಈಗ ಅವರು ಬಿಳಿ ಚರ್ಮದ ಕಾಶ್ಮೀರಿ ಮಹಿಳೆಯರನ್ನು ವಿವಾಹವಾಗಬಹುದು'' ಎಂದು ಸೈನಿ ಹೇಳಿರುವುದೂ ಪತ್ರದಲ್ಲಿ ನಮೂದಿಸಲಾಗಿದೆ.
“ಈಗ ಕಾಶ್ಮೀರ ಎಲ್ಲರಿಗೂ ತೆರೆದಿರುವುದರಿಂದ ಅಲ್ಲಿಂದ ವಧುಗಳನ್ನು ಕರೆತರಬಹುದು ಎಂದು ಕೆಲ ಜನರೀಗ ಹೇಳುತ್ತಿದ್ದಾರೆ. ತಮಾಷೆ ಹಾಗಿರಲಿ, ಲಿಂಗಾನುಪಾತ ಸುಧಾರಿಸಿದರೆ ಸಮಾಜದಲ್ಲಿ ಸಮತೋಲನ ಸಾಧಿಸಬಹುದು'' ಎಂಬ ಖಟ್ಟರ್ ಹೇಳಿಕೆ ಕೂಡ ಪತ್ರದಲ್ಲಿ ಉಲ್ಲೇಖಗೊಂಡಿದೆ.