ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಬಿಜೆಪಿಗೆ ಸೇರ್ಪಡೆ
ಮುಂಬೈ, ಆ. 30: ತಾನು ಈ ವಾರ ಆಡಳಿತಾರೂಢ ಬಿಜೆಪಿಗೆ ಸೇರಲಿದ್ದೇನೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಶುಕ್ರವಾರ ಹೇಳಿದ್ದಾರೆ. ಕಾಂಗ್ರೆಸ್ ತ್ಯಜಿಸಿರುವ ನಾರಾಯಣ ರಾಣೆ ಬಿಜೆಪಿಯ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರು ಈಗ 2018 ಅಕ್ಟೋಬರ್ನಲ್ಲಿ ಸ್ಥಾಪಿಸಿರುವ ‘ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷ’ವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಕೂಡ ನಿರ್ಧರಿದ್ದಾರೆ.
‘‘ಸೆಪ್ಟಂಬರ್ 1ರಂದು ಸೋಲಾಪುರದಲ್ಲಿ ನಡೆಯುವ ರ್ಯಾಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತನಾಡಲಿದ್ದು, ಈ ಸಂದರ್ಭ ತಾನು ಬಿಜೆಪಿ ಸೇರಲಿದ್ದೇನೆ’’ ಎಂದು ಅವರು ತಿಳಿಸಿದ್ದಾರೆ.
ಶೀಘ್ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ನಾರಾಯಣ ರಾಣೆ ಅವರ ಬಿಜೆಪಿ ಪ್ರವೇಶದಿಂದ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಒತ್ತಡ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಣೆ ಶಿವಸೇನೆಗೆ ಸೇರುವ ಮೂಲಕ ತನ್ನ ರಾಜಕೀಯ ಜೀವನ ಆರಂಭಿಸಿದ್ದರು. ಅದು ಅವರನ್ನು ಅಲ್ಪಾವಧಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.
ಇತ್ತೀಚೆಗಿನ ವಾರಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಎನ್ಸಿಪಿಯ ಹಲವು ನಾಯಕರು ಬಿಜೆಪಿಗೆ ಅಥವಾ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿಯ ಮೂಲಗಳ ಪ್ರಕಾರ ಎನ್ಸಿಪಿ ಶಾಸಕ ರಾಣಾ ಜಗಜಿತ್ ಸಿನ್ಹಾ ಹಾಗೂ ಸತಾರಾ ಸಂಸದ ಉದಯನ್ರಾಜೆ ಬೋಸ್ಲೆ ಶೀಘ್ರದಲ್ಲಿ ಬಿಜೆಪಿ ಸೇರಲಿದ್ದಾರೆ.