ಗುಂಪು ಹಲ್ಲೆ ಅಮಾನವೀಯ ಕೃತ್ಯ: ಫಡ್ನವೀಸ್
ಮುಂಬೈ, ಸೆ.1: ಗುಂಪು ಹಲ್ಲೆ ಅಮಾನವೀಯ ಕೃತ್ಯವಾಗಿದ್ದು ಇಂತಹ ಕೃತ್ಯದಲ್ಲಿ ತೊಡಗುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ರಾಜ್ಯದಲ್ಲಿ ‘ಮಹಾಜನಾದೇಶ ಯಾತ್ರೆ’ ಕೈಗೊಂಡಿರುವ ಫಡ್ನವೀಸ್ ಲಾತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇತ್ತೀಚೆಗೆ ದೇಶದ ವಿವಿಧೆಡೆ ವರದಿಯಾಗಿರುವ ಗುಂಪು ಹಲ್ಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗುಂಪು ಹಲ್ಲೆ ಖಂಡಿತಾ ತಪ್ಪು. ತಮ್ಮ ಕೃತ್ಯದ ಪರಿಣಾಮ ಎದುರಿಸಲು ಅಪರಾಧಿಗಳು ಸಿದ್ಧರಾಗಬೇಕು. ಇಂತಹ ಕೃತ್ಯದಲ್ಲಿ ತೊಡಗಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದರು.
ಹಿಂದುತ್ವವಾದಿ ಪಕ್ಷವನ್ನು ಪ್ರತಿನಿಧಿಸುತ್ತಿರುವ ನೀವು, ಉತ್ತಮ ಮಳೆಗಾಗಿ ನಡೆಸುವ ಯಜ್ಞಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಯೋಚಿಸುತ್ತಿರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಾನೊಬ್ಬ ಹಿಂದುತ್ವವಾದಿ ವ್ಯಕ್ತಿ. ಆದರೆ ವೈಜ್ಞಾನಿಕ ಮನೋಭಾವ ಹೊಂದಿದ್ದೇನೆ ಎಂದರು. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಮೋಡಬಿತ್ತನೆಯ ಅಗತ್ಯವಿಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ.