ಯಾರೊಬ್ಬರೂ ರಾಷ್ಟ್ರವಿಹೀನ ವ್ಯಕ್ತಿಗಳಾಗದಂತೆ ಭಾರತ ಗಮನ ಹರಿಸಲಿ: ವಿಶ್ವಸಂಸ್ಥೆ ಅಧಿಕಾರಿ ಒತ್ತಾಯ
ಬರ್ಲಿನ್, ಸೆ.1: ಅಸ್ಸಾಂ ರಾಜ್ಯದ ಪೌರತ್ವ ನೋಂದಣಿ ಪಟ್ಟಿಯಿಂದ ಸುಮಾರು 2 ಮಿಲಿಯನ್ ಜನರನ್ನು ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಅಧಿಕಾರಿ ಫಿಲಿಪ್ಪೊ ಗ್ರಾಂಡಿ, ಯಾವುದೇ ವ್ಯಕ್ತಿ ರಾಷ್ಟ್ರವಿಹೀನ(ಯಾವುದೇ ರಾಷ್ಟ್ರದ ಪ್ರಜೆಗಳಲ್ಲದ ಸ್ಥಿತಿ)ರಾಗದಂತೆ ಖಚಿತಪಡಿಸಬೇಕೆಂದು ಭಾರತವನ್ನು ಒತ್ತಾಯಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ನಿರಾಶ್ರಿತರ ಹೈಕಮಿಷನರ್ ಆಗಿರುವ ಗ್ರಾಂಡಿ ಜಿನೆವಾದಲ್ಲಿ ರವಿವಾರ ಹೇಳಿಕೆ ನೀಡಿದ್ದು, ವ್ಯಕ್ತಿಯೊಬ್ಬನನ್ನು ರಾಷ್ಟ್ರವಿಹೀನ ಸ್ಥಿತಿಗೆ ತಲುಪಿಸುವ ಯಾವುದೇ ಪ್ರಕ್ರಿಯೆಯು ಈ ಸಮಸ್ಯೆಯ ನಿವಾರಣೆಗೆ ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಪ್ರಯತ್ನಗಳಿಗೆ ಭಾರೀ ಹೊಡೆತ ಬೀಳಲಿದೆ ಎಂದಿದ್ದಾರೆ.
ಪೌರತ್ವ ಪಟ್ಟಿಯಿಂದ ಹೊರಗುಳಿದವರಿಗೆ ಕಾನೂನು ನೆರವು ಪಡೆಯಲು ಅವಕಾಶ ಹಾಗೂ ಸಹಾಯ ನೀಡುವುದರ ಜೊತೆಗೆ ಪೌರತ್ವ ಪಟ್ಟಿಗೆ ಸೇರ್ಪಡೆಗೊಳ್ಳುವ ಕ್ರಮಗಳ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸಬೇಕು. ಈ ಮೂಲಕ ಯಾರೊಬ್ಬರೂ ದೇಶವಿಹೀನ ವ್ಯಕ್ತಿಗಳಾಗದಂತೆ ಖಚಿತ ಪಡಿಸಿಕೊಳ್ಳಬೇಕು ಎಂದವರು ಭಾರತವನ್ನು ಒತ್ತಾಯಿಸಿದ್ದಾರೆ.