ಮುಸ್ಲಿಂ ವಿರೋಧಿ ಪೋಸ್ಟ್ ಮಾಡಿದ್ದ ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕಿಯ ವಿರುದ್ಧ ಪ್ರಕರಣ
ಅಸ್ಸಾಂ ಎನ್ಆರ್ ಸಿ
ತಿರುವನಂತಪುರ, ಸೆ.4: ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಕುರಿತಂತೆ ಫೇಸ್ ಬುಕ್ ನಲ್ಲಿ ದ್ವೇಷಪೂರಿತ ಪೋಸ್ಟ್ ಮಾಡಿದ ಲೇಖಕಿ ಹಾಗೂ ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕಿ ಕೆ.ಆರ್. ಇಂದಿರಾ ವಿರುದ್ಧ ಕೊಡುಂಗಲ್ಲೂರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮುಸ್ಲಿಂ ವಿರೋಧಿ ಧೋರಣೆಯಿಂದಾಗಿ ಈಗಾಗಲೇ ಸಾಕಷ್ಟು ವಿವಾದ ಸೃಷ್ಟಿಸಿರುವ ಇಂದಿರಾ ತಮ್ಮ ನೂತನ ಪೋಸ್ಟ್ ನಲ್ಲಿ ಮುಸ್ಲಿಂ ಮಹಿಳೆಯರು ಹಂದಿಗಳಂತೆ ಮಕ್ಕಳನ್ನು ಹೆರುತ್ತಿದ್ದಾರೆ ಎಂದು ಬರೆದಿದ್ದರು “ಅಷ್ಟಕ್ಕೂ ತಮ್ಮ ಸಂಖ್ಯೆಗಳನ್ನು ಹೆಚ್ಚಿಸಿ ಅವರಿಗೆ ಜಗತ್ತನ್ನು ಆಕ್ರಮಿಸಬೇಕಿದೆ. ನಿಮ್ಮಂತಹ ಜನರಿಂದ ಈ ಭೂಮಿಯನ್ನು ರಕ್ಷಿಸಲು ನಳ್ಳಿ ನೀರಿನಲ್ಲಿ ಸಂತಾನ ನಿರೋಧಕ ಔಷಧಿಗಳನ್ನು ಸೇರಿಸಬೇಕಾದೀತು'' ಎಂದು ಆಕೆಯ ಪೋಸ್ಟ್ನಲ್ಲಿ ಬರೆಯಲಾಗಿತ್ತು.
ವಿಪಿನ್ ದಾಸ್ ಎಂಬ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಇಂದಿರಾ ವಿರುದ್ಧ ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 153ಎ ಹಾಗೂ 120 ಒ ಅನ್ವಯ ಪ್ರಕರಣ ದಾಖಲಾಗಿದೆ. ಸೆಕ್ಷನ್ 153ಎ ಅನ್ವಯದ ಪ್ರಕರಣ ಜಾಮೀನು ರಹಿತವಾಗಿದೆ.
ಎನ್ಆರ್ ಸಿ ಪಟ್ಟಿಯಿಂದ ಹೊರಗುಳಿದವರನ್ನು ಅಕ್ರಮ ವಲಸಿಗರಿಗಿರುವ ಶಿಬಿರಗಳಲ್ಲಿರಿಸಬೇಕೆಂದು ತಮ್ಮ ಈ ಹಿಂದಿನ ಪೋಸ್ಟ್ ಗೆ ಇಂದಿರಾ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿ ಬಂದಿತ್ತು, ಇದರ ಬೆನ್ನಲ್ಲೇ ಅವರ ಈ ಟ್ವೀಟ್ ಬಂದಿದೆ.
ದಲಿತ ಕಾರ್ಯಕರ್ತೆ ರೇಖಾ ರಾಜ್ ಕೂಡ ಸೈಬರ್ ಸೆಲ್ ಪೊಲೀಸ್ ಠಾಣೆಯಲ್ಲಿ ಇಂದಿರಾ ಅವರ ಫೇಸ್ ಬುಕ್ ಪೋಸ್ಟ್ ವಿರುದ್ಧ ದೂರು ದಾಖಲಿಸಿದ್ದಾರೆ.