ನಿಮ್ಮ ಕಾರ್ಯ ವ್ಯರ್ಥವಾಗಿಲ್ಲ: ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ರಾಹುಲ್ ಗಾಂಧಿ
ಹೊಸದಿಲ್ಲಿ, ಸೆ.7:ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಇಳಿಯಲು 2.1 ಕಿ.ಲೋ.ಮೀಟರ್ ಇದ್ದಾಗ ಕೊನೆಯ ಹಂತದಲ್ಲಿ ವಿಕ್ರಮ್ ನೌಕೆ ಸಂಪರ್ಕ ಕಳೆದುಕೊಂಡಿದೆ. ಬಹು ನಿರೀಕ್ಷಿತ ಚಂದ್ರಯಾನ-2 ಯೋಜನೆಯು ಯಶಸ್ವಿಯಾಯಿತೇ, ಇಲ್ಲವೇ ಎಂಬ ಬಗ್ಗೆ ವಿಕ್ರಮ್ ಲ್ಯಾಂಡರ್ನಿಂದ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿ ಅವರಿಗೆ ಧೈರ್ಯ ತುಂಬಿದ್ದಾರೆ.
‘ಚಂದ್ರಯಾನ-2 ಮೂನ್ ಮಿಶನ್ನಲ್ಲಿ ನಂಬಲಾಗದ ಕೆಲಸ ಮಾಡಿರುವ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಿಮ್ಮ ಉತ್ಸಾಹ ಹಾಗೂ ಸಮರ್ಪಣಾಭಾವ ಪ್ರತಿ ಭಾರತೀಯನಿಗೆ ಸ್ಫೂರ್ತಿಯಾಗಿದೆ. ನಿಮ್ಮ ಕಾರ್ಯ ವ್ಯರ್ಥವಾಗಿಲ್ಲ. ಭಾರತೀಯ ಬಾಹ್ಯಾಕಾಶ ಮಿಶನ್ನ ಹಾದಿಗೆ ಹಾಗೂ ಮಹಾತ್ವಾಕಾಂಕ್ಷೆಗೆ ಇದೊಂದು ಭದ್ರ ಬುನಾದಿಯಾಗಿದೆ’’ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
‘‘ವಿಕ್ರಮ್ ನೌಕೆಯೊಂದಿಗೆ ಸಂಪರ್ಕ ಸಾಧಿಸುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಇಸ್ರೋದ ಪ್ರತಿಯೊಬ್ಬರ ಕಠಿಣ ಪರಿಶ್ರಮದ ಬಗ್ಗೆ ನಮಗೆ ಬಹಳಷ್ಟು ಹೆಮ್ಮೆಯಿದೆ. ಚಂದ್ರಯಾನ-2ರಲ್ಲಿ ಮಾಡಿರುವ ಸಾಧನೆ ಅಮೋಘ’’ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
‘‘ನಮ್ಮ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಅವರು ಇತಿಹಾಸ ನಿರ್ಮಿಸಿದ್ದಾರೆ. ಅವರು ಹತಾಶರಾಗುವ ಅಗತ್ಯವಿಲ್ಲ. ನಮ್ಮ ವಿಜ್ಞಾನಿಗಳು ಉತ್ತಮ ಕೆಲಸ ಮಾಡಿದ್ದಾರೆ, ಜೈ ಹಿಂದ್’’ ಎಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.