ಅಸ್ಸಾಂ ಎನ್ಆರ್ ಸಿಯಲ್ಲಿ ಸುಪ್ರೀಂ ಕೋರ್ಟ್ ಪಾತ್ರದಿಂದ ಸಾಂವಿಧಾನಿಕ ಕಳವಳ: ಜನತಾ ನ್ಯಾಯಾಧಿಕರಣ
ಹೊಸದಿಲ್ಲಿ,ಸೆ.9: ಅಸ್ಸಾಂ ಎನ್ಆರ್ ಸಿಯನ್ನು ಸಿದ್ಧಗೊಳಿಸುವಲ್ಲಿ ಸರ್ವೋಚ್ಚ ನ್ಯಾಯಾಲಯದ ಪಾತ್ರದಲ್ಲಿಯ ನ್ಯೂನತೆಗಳನ್ನು ಎನ್ ಜಿಒಗಳ ಒಕ್ಕೂಟವೊಂದು ಇಲ್ಲಿ ವಾರಾಂತ್ಯದಲ್ಲಿ ಆಯೋಜಿಸಿದ್ದ ‘ಜನತಾ ನ್ಯಾಯಾಧಿಕರಣ ’ವು ಬೆಟ್ಟು ಮಾಡಿದೆ. ಸರ್ವೋಚ್ಚ ನ್ಯಾಯಾಲಯದ ಪಾತ್ರವು ಮಹತ್ವದ ಸಾಂವಿಧಾನಿಕ ಕಳವಳಗಳನ್ನೆತ್ತಿದೆ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಾಧಿಕರಣದ ಜ್ಯೂರಿ ಮಂಡಳಿಯು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಂ.ಬಿ.ಲೋಕೂರ್ ಮತ್ತು ಕುರಿಯೆನ್ ಜೋಸೆಫ್, ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಎ.ಪಿ.ಶಾ, ಮಾಜಿ ರಾಜತಾಂತ್ರಿಕ ದೇಬ್ ಮುಖರ್ಜಿ,ಲೇಖಕಿ ಗೀತಾ ಹರಿಹರನ್,ಸಾಮಾಜಿಕ ಹೋರಾಟಗಾರ್ತಿ ಸಯೀದಾ ಹಮೀದ್ ಹಾಗೂ ಶಿಕ್ಷಣ ತಜ್ಞರಾದ ಮುನೀರುಲ್ ಹುಸೈನ್ ಮತ್ತು ಫೈಝಾನ್ ಮುಸ್ತಫಾ ಅವರನ್ನೊಳಗೊಂಡಿತ್ತು.
ಎನ್ಆರ್ ಸಿ ಪ್ರಕ್ರಿಯೆಗೆ ಕಾರಣವಾಗಿದ್ದ ಸರ್ವೋಚ್ಚ ನ್ಯಾಯಾಲಯದ ತೀರ್ಪು, ‘ವಲಸೆಯು ಭಾರತದ ಮೇಲೆ ಬಾಹ್ಯ ಆಕ್ರಮಣ ಎನ್ನುವುದನ್ನು ಎತ್ತಿ ಹಿಡಿಯಲು ದೃಢೀಕೃತವಲ್ಲದಿದ್ದ ಮತ್ತು ಈಗ ಅಲ್ಲಗಳೆಯಲಾಗಿರುವ ದತ್ತಾಂಶಗಳನ್ನು ನೆಚ್ಚಿಕೊಂಡಿತ್ತು ಮತ್ತು ಹಾಗೆ ಮಾಡುವ ಮೂಲಕ ವಲಸಿಗರನ್ನು ಅಮಾನವೀಯಗೊಳಿಸಿತ್ತು ಹಾಗೂ ಸಾತಂತ್ರ್ಯ ಮತ್ತು ಘನತೆಯ ಅವರ ಹಕ್ಕುಗಳನ್ನು ಉಲ್ಲಂಘಿಸಿತ್ತು’ ಎಂದು ತನ್ನ ವರದಿಯಲ್ಲಿ ಹೇಳಿರುವ ಜ್ಯೂರಿ ಮಂಡಳಿಯು,ಇಷ್ಟು ಸಾಲದೆಂಬಂತೆ ಎನ್ಆರ್ಸಿ ಪಟ್ಟಿಯ ಸಿದ್ಧತೆಯ ಉಸ್ತುವಾರಿ ವಹಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಆಡಳಿತಾತ್ಮಕ ಪ್ರಕ್ರಿಯೆಯನ್ನು ಸ್ವತಃ ತಾನೇ ನಡೆಸುತ್ತಿತ್ತು. ನ್ಯಾಯಾಲಯಗಳು ಇಂತಹ ಪ್ರಕ್ರಿಯೆಗಳ ಹೊಣೆಗಾರಿಕೆ ವಹಿಸಿಕೊಂಡಾಗ ಪರಿಹಾರಗಳ ವ್ಯವಸ್ಥೆಯನ್ನು ಅಕ್ಷರಶಃ ಕಿತ್ತುಕೊಳ್ಳಲಾಗಿರುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ನ್ಯಾಯಾಲಯದ ಆದೇಶಗಳು ಬಂಧನ ಕೇಂದ್ರಗಳಿಂದ ಬಿಡುಗಡೆಗೊಳ್ಳಲು ಶೋಷಿತರು ಮತ್ತು ದುರ್ಬಲರು ಪೂರೈಸಲು ಸಾಧ್ಯವಿಲ್ಲದ ಕಠಿಣ ಷರತ್ತುಗಳನ್ನು ವಿಧಿಸಿವೆ ಎಂದಿರುವ ಅದು, ಎನ್ಆರ್ಸಿ ಬೃಹತ್ ಪ್ರಮಾಣದ ಪ್ರಕ್ರಿಯೆಯಾಗಿದ್ದರೂ ಅಂತಿಮ ಗಡುವುಗಳನ್ನು ವಿಧಿಸುವ ನ್ಯಾಯಾಲಯದ ಧೋರಣೆಯು ಪ್ರಕ್ರಿಯೆ ಮತ್ತು ಅದರಲ್ಲಿ ಭಾಗಿಯಾಗಿದ್ದ ಜನರ ಮೇಲೆ ಒತ್ತಡವನ್ನು ಹೆಚ್ಚಿಸಿತ್ತು ಎಂದು ಹೇಳಿದೆ. ತಮ್ಮ ಪೌರತ್ವವನ್ನು ಸಾಬೀತುಗೊಳಿಸಲು ದೂರದ ಪ್ರದೇಶಗಳಲ್ಲಿಯ ಅಧಿಕಾರಿಗಳ ಮುಂದೆ ಹಾಜರಾಗಬೇಕಾಗಿದ್ದ ಜನರ ಸಂಕಷ್ಟ,ತಾವು ಪೌರತ್ವವನ್ನು ಕಳೆದುಕೊಳ್ಳಬಹುದು ಎಂಬ ಅವರ ಭೀತಿ ಇತ್ಯಾದಿ ಮಾನವೀಯ ಬಿಕ್ಕಟ್ಟುಗಳನ್ನು ಪ್ರಸ್ತಾಪಿಸಿರುವ ನ್ಯಾಯಾಧಿಕರಣವು,ಇದು ಜನರಲ್ಲಿ ಆತಂಕವನ್ನು ಹೆಚ್ಚಿಸಿತ್ತು ಮತ್ತು ಹಲವರನ್ನು ಆತ್ಮಹತ್ಯೆಗೆ ತಳ್ಳಿತ್ತು ಎಂದಿದೆ.