ಕೇಂದ್ರ ಸರಕಾರ ಕಣ್ಣು ತೆರೆಯುವುದು ಯಾವಾಗ: ಪ್ರಿಯಾಂಕಾ ಗಾಂಧಿ ಪ್ರಶ್ನೆ
ಆಟೊಮೊಬೈಲ್ ವಲಯದ ಬಿಕ್ಕಟ್ಟು
ಹೊಸದಿಲ್ಲಿ, ಸೆ. 10: ಜಿಡಿಪಿ ಇಳಿಕೆ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಭಾರತದ ಆರ್ಥಿಕತೆ ಆರ್ಥಿಕ ಹಿಂಜರಿತದ ಆಳ ಪ್ರಪಾತಕ್ಕೆ ಬೀಳುತ್ತಿದೆ. ಆದುದರಿಂದ ಕೇಂದ್ರ ಸರಕಾರ ಕಣ್ಣು ತೆರೆಯಬೇಕು ಎಂದು ಆಗ್ರಹಿಸಿದ್ದಾರೆ. ಲಕ್ಷಾಂತರ ಭಾರತೀಯರ ಬದುಕಿನ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಆಟೋ ವಲಯ ಹಾಗೂ ಟ್ರಕ್ ವಲಯದ ಬೆಳವಣಿಗೆ ಇಳಿಕೆ ಉತ್ಪಾದನೆ ಹಾಗೂ ಸಾಗಾಟದ ಋಣಾತ್ಮಕ ಬೆಳವಣಿಗೆಯ ಸಂಕೇತ. ಮಾರುಕಟ್ಟೆ ಆತ್ಮವಿಶ್ವಾಸದ ಇಳಿಕೆಯ ಸಂಕೇತ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. ಮಾರುತಿ, ಅಶೋಕ್ ಲೇಲ್ಯಾಂಡ್ಗಳ ಚೆನ್ನೈ ಘಟಕಗಳು 5 ದಿನಗಳ ಕಾಲ ಉತ್ಪಾದನೆ ಸ್ಥಗಿತಗೊಳಿಸಲಿದೆ ಎಂಬ ಮಾಧ್ಯಮ ವರದಿಯನ್ನು ಅವರ ಟ್ವೀಟ್ನೊಂದಿಗೆ ಪೋಸ್ಟ್ ಮಾಡಿದ್ದಾರೆ. ಸರಕಾರ ಯಾವಾಗ ಕಣ್ಣು ತೆರೆಯುತ್ತದೆ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಆರ್ಥಿಕತೆ ನಿರ್ವಹಿಸುವ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಕೇಂದ್ರ ಸರಕಾರದ ಆರ್ಥಿಕತೆಯ ಮಂದಗತಿಗೆ ಚಿಕಿತ್ಸೆ ನೀಡಲು ದೃಢ ಪರಿಹಾರ ಪತ್ತೆಹಚ್ಚುವ ಬದಲು ‘ಶೀರ್ಷಿಕೆ ನಿರ್ವಹಣೆ’ ಮೂಲಕ ಅದು ದೇಶವನ್ನು ನಿಭಾಯಿಸುತ್ತಿದೆ ಎಂದು ಸೆಪ್ಟಂಬರ್ 2ರಂದು ಅವರು ಆರೋಪಿಸಿದ್ದರು.
Next Story