ರಾಮ ಮಂದಿರ ನಿರ್ಮಿಸುತ್ತೇವೆ, ಏಕೆಂದರೆ ಸುಪ್ರೀಂ ಕೋರ್ಟ್ ನಮ್ಮದು ಎಂದ ಉತ್ತರ ಪ್ರದೇಶ ಸಚಿವ!
ಹೊಸದಿಲ್ಲಿ, ಸೆ.11: “ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾವು ಬದ್ಧ. ಸುಪ್ರೀಂ ಕೋರ್ಟ್ ನಮ್ಮದು. ನ್ಯಾಯಾಂಗ, ಈ ದೇಶ ಹಾಗೂ ದೇವಸ್ಥಾನ ಕೂಡ ನಮ್ಮದು'' ಎಂದು ಉತ್ತರ ಪ್ರದೇಶ ಸಹಕಾರಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಮುಕುಟ್ ಬಿಹಾರಿ ವರ್ಮ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಮ್ಮ ಹೇಳಿಕೆ ತೀವ್ರ ಟೀಕೆಗೆ ಗುರಿಯಾದ ನಂತರ ಸಮಜಾಯಿಷಿ ನೀಡಿದ ಸಚಿವ, ತಾವು ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೇರಿದ್ದು ಎಂಬ ಅರ್ಥದಲ್ಲಿ ಹೇಳಿಲ್ಲ ಎಂದಿದ್ದಾರೆ. ಭಾರತೀಯರು ನ್ಯಾಯಾಲಯದ ಮೇಲೆ ನಂಬಿಕೆಯಿರಿಸಿದ್ದಾರೆ ಎಂಬುದು ತಮ್ಮ ಮಾತಿನ ಅರ್ಥ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
“ನಾವು ದೇಶದ ನಿವಾಸಿಗಳು ಹಾಗೂ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆಯಿರಿಸಿದ್ದೇವೆ ಎಂಬುದು ನನ್ನ ಮಾತಿನ ಅರ್ಥ, ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೇರಿದ್ದು ಎಂದು ನಾನು ಹೇಳಿಲ್ಲ,'' ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯ ರಾಮ ಮಂದಿರ ನಿರ್ಮಾಣ ಪರ ತೀರ್ಪು ನೀಡಬಹುದೆಂದು ಹೇಗೆ ಖಚಿತವಾಗಿ ಹೇಳಬಲ್ಲಿರಿ ಎಂಬ ಪ್ರಶ್ನೆಗೆ ವರ್ಮಾ ಬಳಿ ಉತ್ತರವಿರಲಿಲ್ಲ.
Next Story