ನಿಷ್ಠಾವಂತ ಪತಿ, ಅಪ್ರತಿಮ ಪ್ರೇಮಿಯಾಗಿ: ಅಂತರ್-ಧರ್ಮೀಯ ವಿವಾಹವಾದ ಯುವಕನಿಗೆ ಸುಪ್ರೀಂ ಸಲಹೆ
ಹೊಸದಿಲ್ಲಿ, ಸೆ.11: “ನಿಷ್ಠಾವಂತ ಪತಿ ಹಾಗೂ ಅಪ್ರತಿಮ ಪ್ರೇಮಿಯಾಗಬೇಕು''… ಇಂದು ಅಂತರ್-ಧರ್ಮೀಯ ವಿವಾಹ ಪ್ರಕರಣವೊಂದು ತನ್ನ ಮುಂದೆ ಬಂದಾಗ ಸುಪ್ರೀಂ ಕೋರ್ಟ್ ನೀಡಿದ ಸಲಹೆ.
ಹಿಂದೂ ಯುವತಿಯೊಬ್ಬರು ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದು, ಯುವಕ ಹಿಂದು ಧರ್ಮ ಸ್ವೀಕರಿಸಿದ್ದನ್ನು ಒಪ್ಪಿಕೊಂಡಿದ್ದರೂ ಇದು ಕೇವಲ ಬೂಟಾಟಿಕೆ ಎಂದು ಯುವತಿಯ ಕುಟುಂಬ ಹೇಳಿತ್ತು. ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಜಸ್ಟಿಸ್ ಅರುಣ್ ಮಿಶ್ರಾ ನೇತೃತ್ವದ ಪೀಠ “ನಮಗೆ ಕೇವಲ ಯುವತಿಯ ಭವಿಷ್ಯದ ಬಗ್ಗೆ ಚಿಂತೆಯಿದೆ. ನಾವು ಅಂತರ್-ಧರ್ಮೀಯ ಅಥವಾ ಅಂತರ್ಜಾತೀಯ ವಿವಾಹಕ್ಕೆ ವಿರುದ್ಧವಲ್ಲ'' ಎಂದು ಹೇಳಿತು.
ಇದು ಯುವತಿಯರನ್ನು ಸೆಳೆಯುವ ಜಾಲ ಎಂದು ಯುವತಿಯ ತಂದೆ ದೂರಿದಾಗ ತಾನು ಸದುದ್ದೇಶದಿಂದ ಹಿಂದು ಧರ್ಮ ಸ್ವೀಕರಿಸಿದ್ದಾಗಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಯುವಕನಿಗೆ ಸೂಚಿಸಿತು. ಆರ್ಯ ಸಮಾಜದಲ್ಲಿ ವಿವಾಹ ನಡೆದ ನಂತರ ಹೆಸರು ಬದಲಾಯಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದೀರಾ ಎಂದೂ ನ್ಯಾಯಾಲಯ ಯುವಕನಲ್ಲಿ ಕೇಳಿತು.
ಯುವತಿಗೆ ಯಾವುದೇ ರಕ್ಷಣೆ ಅಗತ್ಯವಿಲ್ಲ ಎಂದು ಆಕೆಯ ತಂದೆಯ ಪರ ವಕೀಲರು ವಾದಿಸಿದರು. ಕೊನೆಗೆ ರಾಜ್ಯ ಸರಕಾರದಿಂದ ಉತ್ತರ ಬಯಸಿದ ನ್ಯಾಯಾಲಯ ಯುವತಿಯ ಅಪೀಲನ್ನು ಸ್ವೀಕರಿಸಿದೆ.