ಕಾಶ್ಮೀರಿಗಳಿಗೆ ತಮ್ಮ ಸ್ವಂತ ನಿರ್ಧಾರ ಕೈಗೊಳ್ಳಲು ಸ್ವಾತಂತ್ರ್ಯ ನೀಡಬೇಕು: ಪಂಜಾಬ್ ರೈತ ಸಂಘಟನೆ
ಹೊಸದಿಲ್ಲಿ,ಸೆ.12: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಪಂಜಾಬಿನ ರೈತರ ಸಂಘಟನೆಯೊಂದು ರಾಜ್ಯದ ಬಠಿಂಡಾದಲ್ಲಿ ಪ್ರತಿಭಟನೆ ನಡೆಸಿರುವುದು ವರದಿಯಾಗಿದೆ.
ಭಾರತೀಯ ಕಿಸಾನ ಯೂನಿಯನ್ ಏಕತಾ-ಉಗರ್ಹಾನ್ನ ಹಿರಿಯ ಉಪಾಧ್ಯಕ್ಷ ಝಂಡಾ ಸಿಂಗ್ ಜೇತುಕೆ ಸೇರಿದಂತೆ ಪ್ರತಿಭಟನೆಯಲ್ಲಿ ಮಾತನಾಡಿದ ಹಲವು ರೈತ ನಾಯಕರು, ಕಾಶ್ಮೀರಿಗಳಿಗೆ ತಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಲು ಸ್ವಾತಂತ್ರ್ಯ ಮತ್ತು ಹಕ್ಕನ್ನು ನೀಡಬೇಕು. ಜನರನ್ನು ದೋಚಲು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಿರುವ ಸ್ವಾತಂತ್ರ್ಯವು ಅಂತ್ಯಗೊಳ್ಳಬೇಕು. ಕಾಶ್ಮೀರದಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ರದ್ದುಗೊಳಿಸಬೇಕು. ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕು ಮತ್ತು ಬಂಧಿತರನ್ನು ಬಿಡುಗಡೆಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮಂಡಿಸಿದರು.
ಕಳೆದ 72 ವರ್ಷಗಳಿಂದಲೂ ಆಡಳಿತ ಪಕ್ಷಗಳು ಕಾಶ್ಮೀರಿಗಳನ್ನು ದಮನಿಸಲು ಪ್ರಯತ್ನಿಸಿವೆ. ಸೇನೆಯನ್ನು ಕಳುಹಿಸುವಾಗ ರಾಜ್ಯದಲ್ಲಿ ಸಹಜತೆ ಮರಳಿದ ಬಳಿಕ ತಾವು ವಿಲೀನಗೊಳ್ಳಲು ಬಯಸುವ ರಾಷ್ಟ್ರವನ್ನು ಅಥವಾ ಪ್ರತ್ಯೇಕ ರಾಷ್ಟ್ರ ರಚನೆಯನ್ನು ಆಯ್ದುಕೊಳ್ಳಲು ಕಾಶ್ಮೀರಿಗಳಿಗೆ ಹಕ್ಕು ಒದಗಿಸಲಾಗುವುದು ಎಂಬ ಭರವಸೆಯನ್ನು ನೀಡಲಾಗಿತ್ತು ಎಂದೂ ಈ ನಾಯಕರು ಹೇಳಿರುವುದನ್ನು ವರದಿಯು ಉಲ್ಲೇಖಿಸಿದೆ.
ಆರೆಸ್ಸೆಸ್,ಬಜರಂಗ ದಳ ಮತ್ತು ಇಂತಹುದೇ ಸಿದ್ಧಾಂತಗಳನ್ನು ಹೊಂದಿರುವ ಇತರ ಸಂಘಟನೆಗಳು ದಲಿತರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿವೆ ಎಂದೂ ರೈತ ನಾಯಕರು ಆರೋಪಿಸಿದರು.