ಯುವತಿಯ ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕ ಚಿನ್ಮಯಾನಂದಗೆ ಸಮನ್ಸ್
ಹೊಸದಿಲ್ಲಿ, ಸೆ. 12: ಉತ್ತರಪ್ರದೇಶದ 23ರ ಹರೆಯದ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪಕ್ಕೆ ಒಳಗಾದ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಚಿನ್ಮಯಾನಂದಗೆ ಸಮನ್ಸ್ ಜಾರಿಗೊಳಿಸಲಾಗಿದೆ ಹಾಗೂ ಅವರನ್ನು ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ಮಯಾನಂದಗೆ ಮೂರು ದಿನಗಳ ಹಿಂದೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಅನಾರೋಗ್ಯದ ಕಾರಣಕ್ಕೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಮುಂದಿನ ಕೆಲವು ದಿನಗಳಲ್ಲಿ ಚಿನ್ಮಯಾನಂದನ ವಿಚಾರಣೆ ನಡೆಸುವ ಭರವಸೆ ನಮಗಿದೆ ಎಂದು ಅವರು ಹೇಳಿದ್ದಾರೆ.
ಚಿನ್ಮಯಾನಂದ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ವೀಡಿಯೊ ಮಾಡಿದ್ದಾನೆ. ಅಲ್ಲದೆ, ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಆದರೆ, ಚಿನ್ಮಯಾನಂದನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ನಾವು ಯುವತಿಯನ್ನು ಸುಮಾರು 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದೇವೆ ಎಂದು ಮಾಧ್ಯಮ ವರದಿ ಹೇಳಿದೆ. ಆದರೆ, ಅದು ಸತ್ಯವಲ್ಲ. ನಾವು ಆಕೆಯ ತಂದೆ ಜೊತೆ 5 ಗಂಟೆಗಳ ಕಾಲ ಮಾತನಾಡಿದ್ದೇವೆ. ಅನಂತರ ಆಕೆಯ ಜೊತೆ 5 ಗಂಟೆಗಳ ಕಾಲ ಮಾತನಾಡಿದ್ದೇವೆ. ನಾವು ಯುವತಿಯನ್ನು ಬದುಕಿ ಉಳಿದವರು ಎಂಬ ನೆಲೆಯಲ್ಲಿ ನಡೆಸಿಕೊಳ್ಳುತ್ತಿದ್ದೇವೆ. ನಾವು ಯುವತಿಯ ವಿಚಾರಣೆ ನಡೆಸಿಲ್ಲ. ಆದರೆ, ಅವರ ಹೇಳಿಕೆಯ ಎಲ್ಲ ಲೊಪದೋಷಗಳನ್ನು ತುಂಬಲು ಪ್ರಯತ್ನಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದಿಲ್ಲಿ ಪೊಲೀಸರು ಹಾಗೂ ದಂಡಾಧಿಕಾರಿ ಮುಂದೆ ನೀಡಿದ ಹೇಳಿಕೆಯಲ್ಲಿ ಯುವತಿ, ಚಿನ್ಮಯಾನಂದ ತನ್ನ ಮೇಲೆ ನಿರಂತರ ಒಂದು ವರ್ಷಗಳ ಕಾಲ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿದ್ದರು.