74ನೇ ಜನ್ಮ ದಿನವನ್ನು ಕಾರಾಗೃಹದಲ್ಲಿ ಕಳೆಯಲಿರುವ ಚಿದಂಬರಂ
ಹೊಸದಿಲ್ಲಿ, ಸೆ. 12: ಐಎನ್ಎಕ್ಸ್ ಮಾಧ್ಯಮ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ವಿತ್ತ ಸಚಿವ ಚಿದಂಬರಂ ಅವರು ಸಲ್ಲಿಸಿದ ಜಾಮೀನು ಮನವಿ ಕುರಿತು ಒಂದು ವಾರಗಳ ಒಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಸಿಬಿಐಗೆ ಗುರುವಾರ ನಿರ್ದೇಶಿಸಿದೆ.
ಈ ನಡುವೆ ಚಿದಂಬರಂ ಅವರು ತಮ್ಮ 74ನೇ ಜನ್ಮ ದಿನವನ್ನು ತಿಹಾರ್ ಜೈಲಿನಲ್ಲಿ ಕಳೆಯಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟಂಬರ್ 19ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿರುವ ಚಿದಂಬರಂಗೆ ಸೆಪ್ಟಂಬರ್ 16ಕ್ಕೆ 74 ವರ್ಷವಾಗಲಿದೆ. ಅವರ ಜಾಮೀನು ಮನವಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯ ಸೆಪ್ಟಂಬರ್ 23ಕ್ಕೆ ನಿಗದಿಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಚಿದಂಬರಂ ಅವರನ್ನು ಸೆಪ್ಟಂಬರ್ 19ರಂದು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. 2004ರಿಂದ 2014ರ ವರೆಗಿನ ಯುಪಿಎ ಆಡಳಿತದ ಅವಧಿಯಲ್ಲಿ ಸಚಿವರಾಗಿದ್ದ ಚಿದಂಬರಂ ಅವರನ್ನು ಸಿಬಿಐ ಆಗಸ್ಟ್ 21ರಂದು ಬಾಗ್ ನಿವಾಸದಿಂದ ಬಂಧಿಸಿತ್ತು.
Next Story