ಬಿಜೆಪಿಗೆ ಪಕ್ಷಾಂತರಗೊಂಡವರಿಗೆ ಸಚಿವ ಸ್ಥಾನ: ರಾಜಕೀಯ ಲಾಭದ ನೇಮಕ ಅನೈತಿಕ ಎಂದ ಹೈಕೋರ್ಟ್
ಮುಂಬೈ, ಸೆ.13: ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ಐಎನ್ಪಿ ಮುಖಂಡ ರಾಧಾಕೃಷ್ಣ ವಿಖೆ ಪಾಟೀಲ್ ಹಾಗೂ ಇತರ ಇಬ್ಬರನ್ನು ಮಹಾರಾಷ್ಟ್ರ ಸರಕಾರದ ಸಚಿವರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದರೆ ರಾಜಕೀಯ ಲಾಭದ ನೇಮಕಾತಿ ನೈತಿಕವಾಗಿ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರದ ನೂತನ ಸಚಿವರನ್ನಾಗಿ ವಿಖೆ ಪಾಟೀಲ್, ಜಯದತ್ ಕ್ಷೀರಸಾಗರ ಮತ್ತು ಅವಿನಾಶ್ ಮಹತೇಕರ್ ರನ್ನು ನೇಮಿಸಲಾಗಿದೆ. ಪಾಟೀಲ್ ಇಂಡಿಯನ್ ನ್ಯಾಷನಲ್ ಪಾರ್ಟಿಯ ಶಾಸಕರಾಗಿ ಆಯ್ಕೆಯಾಗಿದ್ದು ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದರು. ಜಯದತ್ ಎನ್ಸಿಪಿ ಪಕ್ಷದ ಶಾಸಕರಾಗಿದ್ದರು. ಅವಿನಾಶ್ ಮಹತೇಕರ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠಾವಳೆ) ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಈ ಮೂವರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಇದು ಸಂವಿಧಾನ ವಿರೋಧಿ ಕ್ರಮವಾಗಿರುವುದರಿಂದ ನೇಮಕಾತಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಕೇವಲ ರಾಜಕೀಯ ಲಾಭ ಮತ್ತು ಅನುಕೂಲಕ್ಕಾಗಿ ಮೂವರನ್ನು ಸಚಿವ ಸಂಪುಟಕ್ಕೆ ಸೇರಿಸಲಾಗಿದೆ. ನೈತಿಕವಾಗಿ ಇದು ಸರಿಯಲ್ಲ. ಆದರೆ ಈ ಮೂವರು ಪಕ್ಷಾಂತರಗೊಂಡಿರುವ ಕಾರಣ ಅನರ್ಹಗೊಳಿಸಬೇಕು ಎಂಬ ನಿರ್ಧಾರಕ್ಕೆ ಬರಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.