ತಬ್ರೇಝ್ ಹತ್ಯೆ ಪ್ರಕರಣದ ಆರೋಪಿಗಳು ಕೊಲೆ ಆರೋಪದಿಂದ ಖುಲಾಸೆ: ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ
ಹೊಸದಿಲ್ಲಿ, ಸೆ.13: ತಬ್ರೇಝ್ ಅನ್ಸಾರಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವವರನ್ನು ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಿದ ಜಾರ್ಖಂಡ್ ಸರಕಾರ ಹಾಗೂ ಪೊಲೀಸರ ಕ್ರಮವನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿರುವ ಜಾರ್ಖಂಡ್ ಭವನದ ಎದುರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ನಾಗರಿಕ ಹಕ್ಕುಗಳಿಗೆ ಹೋರಾಡುವ ‘ಯುನೈಟೆಡ್ ಎಗೈನ್ಸ್ಟ್ ಹೇಟ್’ ಎಂಬ ಸಂಸ್ಥೆಯ ಆಶ್ರಯದಲ್ಲಿ ಪ್ರತಿಭಟನೆ ನಡೆದಿದೆ. ತಬ್ರೇಝ್ ಅನ್ಸಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಾದಿಸಿದ್ದ ಜಾರ್ಖಂಡ್ ಪೊಲೀಸರು ಆರೋಪಿಗಳ ಮೇಲಿದ್ದ ಕೊಲೆ ಆರೋಪವನ್ನು ಕೊಲೆಯಲ್ಲದ ಶಿಕ್ಷಾರ್ಹ ನರಹತ್ಯೆ ಎಂದು ಬದಲಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಅನ್ಸಾರಿ ಕುಟುಂಬದವರು ಹಾಗೂ ವಕೀಲರು ಆರೋಪಿಸಿದ್ದಾರೆ. ಜಾರ್ಖಂಡ್ ಸಿಎಂ ರಘುಬರ್ ದಾಸ್, ಜಾರ್ಖಂಡ್ ಸರಕಾರ ಮತ್ತು ಪೊಲೀಸರ ವಿರುದ್ಧ , ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಬಳಿಕ ಅಲ್ಲಿದ್ದ ಅಧಿಕಾರಿಯ ಮೂಲಕ ಜಾರ್ಖಂಡ್ ಮುಖ್ಯಮಂತ್ರಿಗೆ ಪತ್ರವೊಂದನ್ನು ಸಲ್ಲಿಸಿದರು. ಅನ್ಸಾರಿ ಪ್ರಕರಣದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಪೊಲೀಸರು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳುತ್ತಿದ್ದಾರೆ.
ಅನ್ಸಾರಿ ಮೇಲೆ ಗುಂಪು ಹಲ್ಲೆ ನಡೆದಿರುವುದಕ್ಕೆ ವೀಡಿಯೊ ಸಾಕ್ಷವಿದೆ. ಇಷ್ಟೆಲ್ಲಾ ಸಾಕ್ಷವಿದ್ದರೂ ಈ ಪ್ರಕರಣದ ಅವಸ್ಥೆ ಹೀಗಾದರೆ ಉಳಿದ ಪ್ರಕರಣದ ಸ್ಥಿತಿ ಹೇಗಾದೀತು ಎಂದು ಊಹಿಸಬಹುದು ಎಂದು ಸಂಘಟನೆಯ ಕಾರ್ಯಕರ್ತ ನದೀಮ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಕೊಲೆಗಡುಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೆಎನ್ಯು ವಿದ್ಯಾರ್ಥಿನಿ ಅಪೇಕ್ಷಾ ಪ್ರಿಯದರ್ಶಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂನ್ನಲ್ಲಿ ಈ ಘಟನೆ ನಡೆದಿತ್ತು. ಕಳ್ಳನೆಂಬ ಶಂಕೆಯಲ್ಲಿ 24 ವರ್ಷದ ತಬ್ರೇಝ್ ಅನ್ಸಾರಿಯ ಮೇಲೆ ಜಾರ್ಖಂಡ್ನ ಖರ್ಸಾವಾನ್ ಜಿಲ್ಲೆಯಲ್ಲಿ ಗುಂಪೊಂದು ಹಲ್ಲೆ ನಡೆಸಿತ್ತು. ಸತತ 18 ಗಂಟೆ ಅನ್ಸಾರಿಯನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅನ್ಸಾರಿ ಜೂನ್ 22ರಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.