ಏಕರೂಪ ನಾಗರಿಕ ಸಂಹಿತೆಗಾಗಿ ಪ್ರಯತ್ನಗಳು ನಡೆದಿಲ್ಲ: ಸುಪ್ರೀಂ
ಹೊಸದಿಲ್ಲಿ,ಸೆ.13: ದೇಶದ ಪ್ರಜೆಗಳಿಗೆ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿರುವ ಸರ್ವೋಚ್ಚ ನ್ಯಾಯಾಲಯವು,ತನ್ನ ಸಲಹೆಗಳ ಹೊರತಾಗಿಯೂ ಈ ಗುರಿಯನ್ನು ಸಾಧಿಸಲು ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸಿದೆ.
ಕೆಲವು ಸೀಮಿತ ಹಕ್ಕುಗಳನ್ನು ರಕ್ಷಿಸಿರುವುದನ್ನು ಹೊರತುಪಡಿಸಿ ಧರ್ಮಗಳನ್ನು ಪರಿಗಣಿಸದೆ ಎಲ್ಲರಿಗೂ ಅನ್ವಯವಾಗುವ ಏಕರೂಪ ಸಂಹಿತೆಯನ್ನು ಹೊಂದಿರುವ ಗೋವಾ ಈ ವಿಷಯದಲ್ಲಿ ಉಜ್ವಲ ಉದಾಹರಣೆಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶಂಸಿಸಿತು.
ದೇಶದ ಯಾವುದೇ ಭಾಗದಲ್ಲಿರುವ ಗೋವಾ ನಿವಾಸಿಯ ಆಸ್ತಿಗಳಿಗೆ ಸಂಬಂಧಿಸಿದಂತೆ ಉತ್ತರಾಧಿಕಾರ ಹಕ್ಕುಗಳಿಗೆ ಪೋರ್ಚುಗೀಸ್ ಸಿವಿಲ್ ಕೋಡ್,1867 ಅನ್ವಯಿಸುತ್ತದೆ ಎಂದು ಎತ್ತಿ ಹಿಡಿದು ಶುಕ್ರವಾರ ನೀಡಿದ ತೀರ್ಪಿನಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ದೀಪಕ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ಪೀಠವು,ದೇಶದ ಎಲ್ಲ ಭಾಗಗಳಲ್ಲಿಯೂ ಏಕರೂಪ ನಾಗರಿಕ ಸಂಹಿತೆಯನ್ನು ಅಸ್ತಿತ್ವಕ್ಕೆ ತರಲು ಸರಕಾರವು ಪ್ರಯತ್ನಿಸುತ್ತದೆ ಎಂದು ಭಾಗ ನಾಲ್ಕರ ವಿಧಿ 44ರಲ್ಲಿ ಸಂವಿಧಾನ ನಿರ್ಮಾತೃರು ಆಶಯ ಮತ್ತು ನಿರೀಕ್ಷೆ ವ್ಯಕ್ತಪಡಿಸಿದ್ದರೂ,ಈವರೆಗೆ ಈ ವಿಷಯದಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎನ್ನುವುದು ಆಸಕ್ತಿಯ ವಿಷಯವಾಗಿದೆ ಎಂದು ಹೇಳಿತು.