ಯುವಕನಿಗೆ ರಸ್ತೆಯಲ್ಲೇ ಥಳಿಸಿದ ಪ್ರಕರಣ: ಉ.ಪ್ರದೇಶದ ಇಬ್ಬರು ಪೊಲೀಸರ ಅಮಾನತು, ಕೊಲೆ ಯತ್ನ ಕೇಸ್ ದಾಖಲು
ಲಕ್ನೊ, ಸೆ.14: ಉತ್ತರಪ್ರದೇಶದ ಸಿದ್ದಾರ್ಥ್ ನಗರದಲ್ಲಿ ಇಬ್ಬರು ಪೊಲೀಸರು ಯುವಕನೊಬ್ಬನಿಗೆ ರಸ್ತೆಯಲ್ಲಿ ಮನಬಂದಂತೆ ಥಳಿಸುತ್ತಿದ್ದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ಪೊಲೀಸರ ವಿರುದ್ಧ ಕೊಲೆಗೆ ಯತ್ನಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.
ಇಬ್ಬರು ಪೊಲೀಸರು ಮಂಗಳವಾರ ಯುವಕನಿಗೆ ಬೂಟ್ ಕಾಲಿನಿಂದ ಒದ್ದು, ರಸ್ತೆ ಮೇಲೆ ಎಳೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ದಾರಿಹೋಕನೊಬ್ಬ ವಿಡಿಯೋ ಮಾಡಿದ್ದ. ಬೈಕ್ನಲ್ಲಿ ಚಲಿಸುತ್ತಿದ್ದ ಯುವಕ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದಕ್ಕೆ ವಾಗ್ವಾದ ಆರಂಭವಾಗಿತ್ತು ಎಂದು ಯುವಕನ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಯುವಕ ಮದ್ಯ ಸೇವಿಸಿದ್ದು, ಈ ಪ್ರದೇಶದಲ್ಲಿ ಕೋಮು ಗಲಭೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಯುವಕನನ್ನು ಥಳಿಸುವ ಅಮಾನವೀಯ ದೃಶ್ಯ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಉತ್ತರಪ್ರದೇಶ ಪೊಲೀಸ್ ಇಲಾಖೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದೆ. ರಿಂಕಿ ಪಾಂಡೆ ಎಂಬ ವ್ಯಕ್ತಿ ಬೈಕ್ನಲ್ಲಿ ತೆರಳುತ್ತಿದ್ದಾಗ ಪೊಲೀಸರು ಆತನನ್ನು ತಡೆದು ದಾಖಲೆಯ ಪರಿಶೀಲನೆಗೆ ಮುಂದಾದರು. ದಾಖಲೆ ನೀಡದ ವ್ಯಕ್ತಿಯ ಮೇಲೆ ಸಬ್ ಇನ್ಸ್ಪೆಕ್ಟರ್ ವೀರೇಂದ್ರ ಮಿಶ್ರಾ ಹಾಗೂ ಮುಖ್ಯ ಕಾನ್ಸ್ಟೇಬಲ್ ಮಹೇಂದ್ರ ಪ್ರಸಾದ್ ಯುವಕನಿಗೆ ಥಳಿಸಿ, ನಿಂದಿಸಲಾರಂಭಿಸಿದರು. ಓರ್ವ ಪೊಲೀಸ್ ಯುವಕನನ್ನು ಕೆಡವಿ ಆತನ ಮೇಲೆ ಕುಳಿತುಕೊಂಡಿದ್ದಲ್ಲದೆ, ತಲೆ ಕೂದಲು ಹಿಡಿದು ನೂಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.