‘ಬಾಬರ್ ರಸ್ತೆ’ ಹೆಸರಿನ ಫಲಕಕ್ಕೆ ಕಪ್ಪು ಬಣ್ಣ ಬಳಿದ ಹಿಂದು ಸೇನಾ ಕಾರ್ಯಕರ್ತರು
ಹೊಸದಿಲ್ಲಿ, ಸೆ.14: ಕೇಂದ್ರ ದಿಲ್ಲಿಯ ಬಿಗಿ ಭದ್ರತಾ ವಲಯದ ಬಾಬರ್ ರಸ್ತೆಯ ಸೂಚನಾ ಫಲಕಕ್ಕೆ ಹಿಂದು ಸೇನಾ ಕಾರ್ಯಕರ್ತರು ಕಪ್ಪು ಬಣ್ಣ ಬಳಿದಿದ್ದಾರೆ ಹಾಗೂ ರಸ್ತೆಯ ಹೆಸರು ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ.
ಕನ್ನಾಟ್ ಪ್ಲೇಸ್ ಸಮೀಪದ ಈ ರಸ್ತೆಗೆ ಮುಘಲ್ ಸಾಮ್ರಾಜ್ಯದ ಮೊದಲ ದೊರೆ ಬಾಬರ್ ಹೆಸರಿಡಲಾಗಿತ್ತು. ಈ ರಸ್ತೆಗೆ ಭಾರತದ ಯಾವುದಾದರೂ ಮಹಾನ್ ನಾಯಕರ ಹೆಸರಿಡಬೇಕೆಂದು ಹಿಂದು ಸೇನೆ ಆಗ್ರಹಿಸಿದೆ. ವಿದೇಶಿ ಆಕ್ರಮಣಕಾರನ ಹೆಸರು ಈ ರಸ್ತೆಗೆ ಸರಿಯಲ್ಲ, ಇದೇ ಕಾರಣಕ್ಕೆ ಹೆಸರಿನ ಸೂಚನಾ ಫಲಕಕ್ಕೆ ಕಪ್ಪು ಬಣ್ಣ ಬಳಿಯಲಾಗಿದೆ ಎಂದು ಹಿಂದು ಸೇನಾ ಅಧ್ಯಕ್ಷ ವಿಷ್ಣು ಗುಪ್ತ ಹೇಳಿಕೊಂಡಿದ್ದಾರೆ.
ಈ ಕೃತ್ಯ ನಡೆಸಿದವರ ವಿರುದ್ಧ ದಿಲ್ಲಿ ಮುನಿಸಿಪಲ್ ಕೌನ್ಸಿಲ್ ಯಾವ ಕ್ರಮ ಕೈಗೊಳ್ಳಲಿದೆ ಎಂದು ತಿಳಿದು ಬಂದಿಲ್ಲ.
ಕಳೆದ ವರ್ಷ ದಿಲ್ಲಿಯ ಅಕ್ಬರ್ ರೋಡ್ ಸೂಚನಾ ಫಲಕವನ್ನು ರಾತ್ರಿ ಬೆಳಗಾಗುವುದರೊಳಗಾಗಿ ಕೆಲವರು ಮಹಾರಾಣ ಪ್ರತಾಪ್ ರೋಡ್ ಎಂದು ತಾವಾಗಿಯೇ ಮರು ನಾಮಕರಣ ಮಾಡಿದ್ದರೆ, 2015ರಲ್ಲಿ ಔರಂಗ್ಜೇಬ್ ರಸ್ತೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರಿಡಲಾಗಿತ್ತು. ಇದರ ಮರುವರ್ಷವೇ ರೇಸ್ ಕೋರ್ಸ್ ರಸ್ತೆಗೆ ಲೋಕ್ ಕಲ್ಯಾಣ್ ಮಾರ್ಗ್ ಎಂದು ಮರು ನಾಮಕರಣ ಮಾಡಲಾಗಿತ್ತು.