ಮಕ್ಕಳು ಪಬ್ ಜಿ ಆಡುವ ಕಾರಣ ಪಾರ್ಲೆ ಜಿ ಮಾರಾಟ ಕುಸಿತ: ನಿರ್ಮಲಾ ಹೇಳಿಕೆಗೆ ಶಿವಸೇನೆ ವ್ಯಂಗ್ಯ
ಹೊಸದಿಲ್ಲಿ,ಸೆ.14: ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಪಿಯೂಶ್ ಗೋಯಲ್ ಆರ್ಥಿಕ ಬಿಕ್ಕಟ್ಟಿಗೆ ನೀಡಿರುವ ಸಮಜಾಯಿಷಿಗಳ ಬಗ್ಗೆ ವ್ಯಂಗ್ಯವಾಡಿರುವ ಶಿವಸೇನೆ, ಮಕ್ಕಳು ಪಬ್ ಜಿ ಆಡುತ್ತಿರುವುದರಿಂದ ಪಾರ್ಲೆಜಿ ಮಾರಾಟ ಇಳಿಮುಖವಾಗಿದೆ ಎಂದು ತಿಳಿಸಿದೆ.
ಈ ಕುರಿತು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸೇನೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದರೆ ಅವರ ಸಚಿವರು, ಆರ್ಥಿಕತೆ ಮತ್ತು ಉದ್ಯೋಗದ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡುವ ಮೂಲಕ ಅವರ ಕೆಲಸವನ್ನು ಮತ್ತಷ್ಟು ಕಠಿಣಗೊಳಿಸುತ್ತಿದ್ದಾರೆ ಎಂದು ತಿಳಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೈಗಾರಿಕೆ ಮತ್ತು ಕಾಮರ್ಸ್ ಸಚಿವ ಪಿಯೂಶ್ ಗೋಯಲ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಸೇನೆ, ನಮ್ಮ ಸಚಿವರು ವಿಜ್ಞಾನದ ಮೂಲವನ್ನೇ ಬದಲಿಸಲು ಹೊರಟಿದ್ದಾರೆ. ಆದರೆ ಇವರ ಈ ಸಂಶೋಧನೆ ಉದ್ಯೋಗವಿಲ್ಲದ ಲಕ್ಷಾಂತರ ಜನರಿಗೆ ಉದ್ಯೋಗ ಕೊಡಿಸಬಹುದೇ ಎಂದು ಪ್ರಶ್ನಿಸಿದೆ. ಇದೇ ವೇಳೆ ಪಾರ್ಲೆಜಿ ಮತ್ತು ಮೆಟ್ರೊ ರೈಲ್ ಬಗ್ಗೆಯೂ ಪ್ರಸ್ತಾವಿಸಿದ ಸೇನೆ, ಮುಂಬೈ-ಮಹಾರಾಷ್ಟ್ರ ಮೆಟ್ರೊ ರೈಲಿನಲ್ಲಿ ಪ್ರತಿದಿನ 60 ಲಕ್ಷ ಜನರು ಪ್ರಯಾಣಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೆ ಇದರಿಂದ ಆಟೋ ಮಾರಾಟದ ಮೇಲೆ ಪರಿಣಾಮ ಬೀರಿ ನಿರುದ್ಯೋಗ ಉಂಟಾಗುವುದೇ ಎಂದು ಪ್ರಶ್ನಿಸಿದೆ.
ಅಷ್ಟು ಮಾತ್ರವಲ್ಲದೆ, ಪಾರ್ಲೆಜಿ ಮಾರಾಟ ಕುಸಿತಗೊಂಡು ಹತ್ತು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಹಾಗಾದರೆ ಮಕ್ಕಳು ಪಬ್ಜಿ ಆಡುತ್ತಿರುವುದರಿಂದ ಪಾರ್ಲೆಜಿ ಮಾರಾಟದಲ್ಲಿ ಕುಸಿವಾಗಿದೆ ಎಂದರ್ಥವೇ ಎಂದು ಸೇನೆ ಪ್ರಶ್ನಿಸಿದೆ.
ಆರ್ಥಿಕತೆ ಮತ್ತು ಉದ್ಯೋಗ ನಷ್ಟದ ಬಗ್ಗೆ ಸರಕಾರವನ್ನು ಟೀಕಿಸಿರುವ ಸೇನೆ, ವ್ಯಾಪಾರಿಗಳು, ರೈತರು ಮತ್ತು ಉದ್ಯೋಗಿಗಳು ತಮ್ಮ ಆದಾಯದ ಮೂಲವನ್ನು ಕಳೆದಕೊಳ್ಳುತ್ತಿದ್ದಾರೆ ಮತ್ತು ಇದು ಐನ್ಸ್ಟೈನ್ ಅಥವಾ ನ್ಯೂಟನ್ಗೆ ಸಂಬಂಧಿಸಿದ್ದಲ್ಲ. ಇದನ್ನೇ ಮನಮೋಹನ್ ಸಿಂಗ್ ಅವರೂ ಹೇಳಿದ್ದಾರೆ ಎಂದು ಸೇನೆ ತಿಳಿಸಿದೆ.