ವಿದೇಶಿ ಪತ್ರಕರ್ತರತ್ತ ಮೋಹನ್ ಭಾಗ್ವತ್ ಚಿತ್ತ: ಕಾರಣ ಏನು ಗೊತ್ತೇ ?
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮತ್ತು ಸಂಘ ತತ್ವಗಳ ಬಗ್ಗೆ ಇರುವ "ತಪ್ಪುಕಲ್ಪನೆ" ಹೋಗಲಾಡಿಸುವ ಪ್ರಯತ್ನವಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಈ ತಿಂಗಳ ಕೊನೆಗೆ ವಿದೇಶಿ ಪತ್ರಕರ್ತರ ಜತೆ ಸಂವಾದ ನಡೆಸಲಿದ್ದಾರೆ.
ಪಾಕಿಸ್ತಾನ ಹೊರತುಪಡಿಸಿ ಉಳಿದ ದೇಶಗಳ 70ಕ್ಕೂ ಹೆಚ್ಚು ವಿದೇಶಿ ಪತ್ರಕರ್ತರನ್ನು ಈ ಸಂವಾದಕ್ಕೆ ಆಹ್ವಾನಿಸಲಾಗಿದೆ ಎಂದು ಸಂಘಟನೆಯ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ವಿವಿಧ ವಿಷಯಗಳ ಬಗ್ಗೆ ಸಂಘದ ನಿಲುವು ಸ್ಪಷ್ಟಪಡಿಸುವುದು ಹಾಗೂ ಸಂಘಟನೆಯ ಬಗ್ಗೆ ಹಲವು ವರ್ಷಗಳಿಂದ ಬೆಳೆದುಬಂದ ತಪ್ಪು ಕಲ್ಪನೆ ಹೋಗಲಾಡಿಸುವುದು ಈ ಸಂವಾದದ ಉದ್ದೇಶ. ಇದು ಸುದ್ದಿಯ ದೃಷ್ಟಿಯಿಂದ ನಡೆಸುವ ಸಂವಾದ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿದೇಶಿ ಪತ್ರಕರ್ತರ ಜತೆ ಆರೆಸ್ಸೆಸ್ ಸಂವಾದ ನಡೆಸುತ್ತಿರುವುದು ಇದೇ ಮೊದಲು.
ಸಂವಾದ ಆರಂಭದಲ್ಲಿ ಭಾಗ್ವತ್ ಪ್ರಾಸ್ತಾವಿಕವಾಗಿ ಮಾತನಾಡುವರು. ಬಳಿಕ ಪ್ರಶ್ನೋತ್ತರಕ್ಕೆ ಮುಕ್ತ ಅವಕಾಶ ಇರುತ್ತದೆ. ಸಂಘದ ಪ್ರಚಾರ ವಿಭಾಗ ಈ ಸಭೆಯನ್ನು ಆಯೋಜಿಸುತ್ತಿದ್ದು, ಅಂಬೇಡ್ಕರ್ ಅಂತರ್ ರಾಷ್ಟ್ರೀಯ ಕೇಂದ್ರದಲ್ಲಿ ಇದು ನಡೆಯಲಿದೆ ಎಂದು ವಿವರಿಸಿದ್ದಾರೆ.