ಪ್ರವಾಸಿ ಬೋಟ್ ಮುಳುಗಡೆ: ಐವರು ಮೃತ್ಯು
30ಕ್ಕೂ ಅಧಿಕ ಜನರು ನಾಪತ್ತೆ
ಅಮರಾವತಿ,ಸೆ.15: ಪ್ರವಾಸಿ ಬೋಟ್ ಮಗುಚಿ ಐವರು ಸಾವನ್ನಪ್ಪಿ ಮೂವತ್ತಕ್ಕೂ ಅಧಿಕ ಮಂದಿ ನಾಪತ್ತೆಯಾದ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಗೋದಾವರಿ ನದಿಯಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ರಾಜ್ಯ ಪ್ರವಾಸೋದ್ಯಮ ಮಂಡಳಿಗೆ ಸೇರಿದ ಬೋಟ್ನಲ್ಲಿ 63 ಜನರು ಪ್ರಯಾಣಿಸುತ್ತಿದ್ದರು ಮತ್ತು ಈ ಪೈಕಿ 23 ಮಂದಿಯನ್ನು ರಕ್ಷಿಸಲಾಗಿದೆ. ದೇವಿಪಟ್ಣಂ ಬಳಿಯಿರುವ ಗಂಡಿ ಪೊಚ್ಚಮ್ಮ ದೇವಸ್ಥಾನದಿಂದ ಪ್ರವಾಸಿಗರನ್ನು ಹೊತ್ತ ಬೋಟ್ ಪಪಿಕೊಂಡಲು ಪರ್ವತಶ್ರೇಣಿಯತ್ತ ಸಾಗುತ್ತಿದ್ದ ವೇಳೆ ಕಚ್ಚುಲುರು ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯದ ಬಗ್ಗೆ ಮುಖ್ಯಮಂತ್ರಿ ವೈ.ಎಸ್ ಜಗನ್ಮೋಹನ್ ರೆಡ್ಡಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು ಒಎನ್ಜಿಸಿಗೆ ಸೇರಿದ ಹೆಲಿಕಾಪ್ಟ್ಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲದಿನಗಳಿಂದ ಗೋದಾವರಿ ನದಿಗೆ ಹೆಚ್ಚುವರಿ ಐದು ಲಕ್ಷ ಕ್ಯುಸೆಕ್ಸ್ ನೆರೆನೀರು ಹರಿದುಬಂದ ಪರಿಣಾಮ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. .