ವಿಧಿ 370ರ ರದ್ದತಿ ವಿರುದ್ಧದ ಅರ್ಜಿಯ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ಹೊಸದಿಲ್ಲಿ,ಸೆ.16: ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಹೇರಿಕೆ ಮತ್ತು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ವಿಧಿ 370ರ ರದ್ದತಿಯನ್ನು ಪ್ರಶ್ನಿಸಿ ಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ (ಜೆಕೆಪಿಸಿ) ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಮತ್ತು ಎಸ್.ಎ.ನಝೀರ್ ಅವರನ್ನೊಳಗೊಂಡ ಪೀಠವು ರಾಜ್ಯದಲ್ಲಿ ವಿಧಿ 370ನ್ನು ರದ್ದುಗೊಳಿಸಿರುವ ರಾಷ್ಟ್ರಪತಿಗಳ ಆದೇಶದ ಸಿಂಧುತ್ವ ಪರಿಶೀಲನೆಗಾಗಿ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಒಪ್ಪಿಸಲಾಗಿರುವ ಅರ್ಜಿಗಳೊಂದಿಗೆ ಜೆಕೆಪಿಸಿಯ ಅರ್ಜಿಯನ್ನು ಸೇರಿಸಿತು.
ವಿಧಿ 370ರ ರದ್ದತಿ ಕುರಿತು ಹೊಸ ಅರ್ಜಿಗಳನ್ನು ಅಂಗೀಕರಿಸಲು ನಿರಾಕರಿಸಿದ ಪೀಠವು,ಈ ವಿಷಯದಲ್ಲಿ ಅರ್ಜಿಗಳ ಸಂಖ್ಯೆಯನ್ನು ತಾನು ಹೆಚ್ಚಿಸುವುದಿಲ್ಲ ಎಂದು ತಿಳಿಸಿತು.
ಈ ವಿಷಯದಲ್ಲಿ ವಾದಿಸಲು ಬಯಸುವವರು ದಾವೆಯಲ್ಲಿ ಸೇರಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಬಹುದು ಎಂದು ನ್ಯಾಯಾಲಯವು ಹೇಳಿತು.
ಅಕ್ಟೋಬರ್ ಮೊದಲ ವಾರದಲ್ಲಿ ಸಂವಿಧಾನ ಪೀಠದಿಂದ ವಿಚಾರಣೆ ನಿಗದಿಯಾಗಿರುವ ಹಲವಾರು ಅರ್ಜಿಗಳನ್ನು ಪ್ರಸ್ತಾಪಿಸಿದ ಪೀಠವು,ನಾವು ಶಾಸಕಾಂಗ ಕ್ರಮದ ಸಿಂಧುತ್ವವನ್ನು ಪರಿಶೀಲಿಸಲಿದ್ದೇವೆ ಎಂದು ತಿಳಿಸಿತು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಕೇಂದ್ರದ ನಿರ್ಧಾರಗಳನ್ನು ಪ್ರಶ್ನಿಸಿರುವ ಜೆಕೆಪಿಸಿ,ರಾಜ್ಯ ಪುನರ್ಘಟನೆ ಕಾಯ್ದೆ ಮತ್ತು ರಾಷ್ಟ್ರಪತಿಗಳ ಆದೇಶಗಳನ್ನು ಸಂವಿಧಾನಬಾಹಿರ ಮತ್ತು ಅಸಿಂಧು ಎಂದು ಘೋಷಿಸಲು ನಿರ್ದೇಶವನ್ನು ಕೋರಿದೆ.
ಜೆಕೆಪಿಸಿ ರಾಜ್ಯದ ಸಾಂವಿಧಾನಿಕ ಸ್ಥಾನಮಾನದಲ್ಲಿ ಮಾಡಲಾಗಿರುವ ಬದಲಾವಣೆಗಳಿಗೆ ಕಾನೂನು ಸವಾಲು ಒಡ್ಡಿರುವ ಎರಡನೇ ಪಕ್ಷವಾಗಿದೆ. ಇದಕ್ಕೂ ಮುನ್ನ ಎನ್ಸಿ ಸಂಸದರಾದ ಮುಹಮ್ಮದ್ ಅಕ್ಬರ್ ಲೋನೆ ಮತ್ತು ಹಸ್ನೈನ್ ಮಸೂದಿ ಅವರು ಪಕ್ಷದ ಪರವಾಗಿ ಸುಪ್ರೀಂ ಮೆಟ್ಟಿಲನ್ನೇರಿದ್ದರು.
ಜಮ್ಮು-ಕಾಶ್ಮೀರ ರಾಜ್ಯಪಾಲರು ಇಡೀ ದೇಶವನ್ನು ಅಂಧಕಾರದಲ್ಲಿಟ್ಟಿದ್ದರು. ರಾಜ್ಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಇಂತಹ ತೀವ್ರ ಕ್ರಮವನ್ನು ಕೈಗೊಳ್ಳುವ ಬಗ್ಗೆ ದೇಶಕ್ಕೆ ಮಾಹಿತಿ ನೀಡಲಾಗಿರಲಿಲ್ಲ ಎಂದು ಜೆಕೆಪಿಸಿ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಸಂಸತ್ತು ಅಂಗೀಕರಿಸಿರುವ ಜಮ್ಮು-ಕಾಶ್ಮೀರ ಪುನರ್ಘಟನೆ ಕಾಯ್ದೆಯನ್ನು ಪ್ರಶ್ನಿಸಿರುವ ಅದು,ದೇಶದ ಇತಿಹಾಸದಲ್ಲೆಂದೂ ವಿಧಿ 3ರಡಿ ಪುನರ್ಘಟನೆ ನಡೆದಿಲ್ಲ ,ಇದು ನಮ್ಮ ಸಂವಿಧಾನ ಮತ್ತು ರಾಜ್ಯವೊಂದರ ಜನತೆಯ ಸ್ವಾತಂತ್ರ್ಯದ ಮೇಲೆ ರಾಜಾರೋಷ ದಾಳಿಯನ್ನು ತೋರಿಸುತ್ತಿದೆ ಎಂದಿದೆ. ಜಮ್ಮು-ಕಾಶ್ಮೀರವು ಪ್ರತ್ಯೇಕ ಸಂವಿಧಾನವನ್ನು ಹೊಂದಿತ್ತು ಮತ್ತು ರಾಜ್ಯಕ್ಕಾಗಿ ಕಾನೂನು ರೂಪಿಸುವ ಸೀಮಿತ ಅಧಿಕಾರ ಮಾತ್ರ ಸಂಸತ್ತಿಗಿತ್ತು ಎಂದು ಪ್ರತಿಪಾದಿಸಿದೆ.