ಸಚಿವರ ತೆರಿಗೆ ಪಾವತಿಸುವ ರಾಜ್ಯ ಉತ್ತರ ಪ್ರದೇಶ ಮಾತ್ರ ಅಲ್ಲ !
ಹೊಸದಿಲ್ಲಿ: ಮುಖ್ಯಮಂತ್ರಿ ಹಾಗೂ ಸಂಪುಟ ಸಹೋದ್ಯೋಗಿಗಳು ಪಡೆಯುವ ವೇತನದ ಮೇಲಿನ ತೆರಿಗೆಯನ್ನು ಸರ್ಕಾರದ ಖಜಾನೆಯಿಂದ ಭರಿಸುವ ಉತ್ತರ ಪ್ರದೇಶ ಸರ್ಕಾರದ ಕ್ರಮದ ಬಗ್ಗೆ ಇತ್ತೀಚೆಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಚಿವರ ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳ ಕಾಯ್ದೆ- 1981ಕ್ಕೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿತ್ತು.
ಆದರೆ ಮಧ್ಯಪ್ರದೇಶ, ಛತ್ತೀಸ್ಗಢ, ಹರ್ಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕೂಡಾ ಇಂಥದ್ದೇ ವ್ಯವಸ್ಥೆ ಜಾರಿಯಲ್ಲಿದ್ದು, ಹಲವು ವರ್ಷಗಳಿಂದ ಸರ್ಕಾರವೇ ತೆರಿಗೆ ತುಂಬುತ್ತಿವೆ ಎಂಬ ಅಂಶ ತಿಳಿದುಬಂದಿದೆ.
ಬಡವರು ಹಾಗೂ ಬರುವ ಅಲ್ಪ ಆದಾಯದಲ್ಲಿ ತೆರಿಗೆ ಪಾವತಿಸಲು ಅಸಮರ್ಥರು ಎಂಬ ಕಾರಣ ನೀಡಿ ಸಚಿವರ ತೆರಿಗೆಗಳನ್ನು ಸರ್ಕಾರದ ಖಜಾನೆಯಿಂದಲೇ ಭರಿಸುವ ಕಾನೂನನ್ನು ವಿ.ಪಿ.ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಇದನ್ನು ರದ್ದುಪಡಿಸುವುದಾಗಿ ಆದಿತ್ಯನಾಥ್ ಸರ್ಕಾರ ಪ್ರಕಟಿಸಿದೆ.
ಉಳಿದ ಐದು ರಾಜ್ಯಗಳ ಪೈಕಿ ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ 1966ರಿಂದಲೂ ಮುಖ್ಯಮಂತ್ರಿಗಳು ಹಾಗೂ ಸಚಿವರ ತೆರಿಗೆಯನ್ನು ಆಯಾ ರಾಜ್ಯಗಳ ಖಜಾನೆಗಳೇ ತುಂಬುತ್ತಿವೆ. ಪಂಜಾಬ್ನಲ್ಲೂ 2018ರ ಮಾರ್ಚ್ 18ರ ವರೆಗೂ ಸಚಿವರು ಬೊಕ್ಕಸಕ್ಕೆ ಹೊರೆಯಾಗುತ್ತಿದ್ದರು. ಆದರೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿಯಾದ ಬಳಿಕ ಪೂರ್ವ ಪಂಜಾಬ್ ಸಚಿವರ ವೇತನ ಕಾಯ್ದೆ- 1947ಕ್ಕೆ ತಿದ್ದುಪಡಿ ತರಲಾಗಿತ್ತು.
ಉತ್ತರಾಖಂಡದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸ್ಪೀಕರ್, ಉಪಸ್ಪೀಕರ್, ವಿರೋಧ ಪಕ್ಷದ ನಾಯಕರಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಈ ಸಂಬಂಧ ಉತ್ತರ ಪ್ರದೇಶದ ಹಾದಿ ಹಿಡಿಯುವುದಾಗಿ ಘೋಷಿಸಿದ್ದಾರೆ.
ಮಧ್ಯಪ್ರದೇಶದಲ್ಲಿ 1994ರ ಎಪ್ರಿಲ್ ಒಂದರಿಂದ ಎಲ್ಲ ಸಚಿವರು ಮತ್ತು ಸಂಸದೀಯ ಕಾರ್ಯದರ್ಶಿಗಳ ವೇತನದ ಮೇಲಿನ ತೆರಿಗೆಯನ್ನು ಖಜಾನೆ ಭರಿಸುತ್ತಿದೆ.