ಕಾಶ್ಮೀರಿಗಳು ನಿಧಾನವಾಗಿ ಸಾಯುತ್ತಿದ್ದಾರೆ: ಸಿಪಿಐ(ಎಂ) ನಾಯಕ ತಾರಿಗಾಮಿ
ಶ್ರೀನಗರ,ಸೆ.18: ಆಗಸ್ಟ್ 5ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ದಿನದಿಂದ ಕಣಿವೆ ರಾಜ್ಯದಲ್ಲಿ ಒಂದು ಗುಂಡನ್ನೂ ಹಾರಿಸಲಾಗಿಲ್ಲ ಎಂಬ ಬಿಜೆಪಿ ಸರಕಾರದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಶ್ಮೀರದ ಸಿಪಿಐ(ಎಂ) ನಾಯಕ ಮತ್ತು ಮಾಜಿ ಶಾಸಕ ಮುಹಮ್ಮದ್ ಯೂಸುಫ್ ತಾರಿಗಾಮಿ, ನಿರ್ಬಂಧದ ಪರಿಣಾಮ ಕಾಶ್ಮೀರಿಗಳು ನಿಧಾನವಾಗಿ ಸಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪಕ್ಷದ ಮುಖ್ಯಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ತಾರಿಗಾಮಿ ಈ ಹೇಳಿಕೆಯನ್ನು ನೀಡಿದ್ದಾರೆ.
ನಾವೂ ಬದುಕಲು ಬಯಸುತ್ತೇವೆ. ಓರ್ವ ಕಾಶ್ಮೀರಿ, ಓರ್ವ ಭಾರತೀಯ ಇಲ್ಲಿ ಮಾತನಾಡುತ್ತಿದ್ದಾನೆ. ನಮ್ಮ ಮಾತನ್ನೂ ಕೇಳಿ, ನಮಗೂ ಜೀವಿಸುವ ಹಕ್ಕು ನೀಡಿ ಎಂದು ತಾರಿಗಾಮಿ ದೇಶವಾಸಿಗಳಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ. ಕಾಶ್ಮೀರಿಗಳಿಗೆ ಹೊಡೆಯುವ ಮತ್ತು ಜೈಲಿನಲ್ಲಿ ಕೂಡಿಹಾಕುವ ಮೂಲಕ ಮತ್ತು ಸಂವಹನ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಜನಜೀವನಕ್ಕೆ ತೊಂದರೆ ನೀಡುವ ಮೂಲಕ ಸರಕಾರ ಜನರ ವಿಶ್ವಾಸ ಗಳಿಸಲು ಸಾಧ್ಯವೇ ಎಂದು ತಾರಿಗಾಮಿ ಪ್ರಶ್ನಿಸಿದ್ದಾರೆ.