ಉದ್ಧವ್ ಠಾಕ್ರೆ ಕಣ್ಣು ಕೆಂಪಾಗಿಸಿದ ಪ್ರಧಾನಿ ಮೋದಿ ಭಾಷಣ
ಮುಂಬೈ, ಸೆ. 20: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆಯೋಜಿಸಿದ್ದ ‘ಮಹಾಜನಾದೇಶ ಯಾತ್ರಾ’ ಸಮಾಪ್ತಿ ಹಿನ್ನೆಲೆಯಲ್ಲಿ ನಾಸಿಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರು ಕೆಲವು ವಿಷಯಗಳ ಬಗ್ಗೆ ಮಾತನಾಡದೇ ಇರುವುದು ಹೆಚ್ಚು ಗಮನಾರ್ಹವಾದುದು.
ಇದು ಒಂದೆಡೆಯಲ್ಲಿ ಶಿವಸೇನೆಯನ್ನು ಅಸಮಾಧಾನಗೊಳಿಸಿದೆ. ಈ ಹಿನ್ನೆಲೆಯಲ್ಲಿ ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಶುಕ್ರವಾರ ಪಕ್ಷದ ನಾಯಕರ ರಹಸ್ಯ ಸಭೆ ನಡೆಸಿದ್ದಾರೆ.
ವಿಧಾನ ಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದ ರ್ಯಾಲಿಯ ಸಂದರ್ಭ ಎನ್ಡಿಎಯ ಅತಿ ದೊಡ್ಡ ಮಿತ್ರ ಪಕ್ಷವಾದ ಶಿವಸೇನೆಯ ಬಗ್ಗೆ ಒಂದೇ ಒಂದು ಮಾತನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಆಡದೇ ಇರುವುದು ಉದ್ಧವ್ ಠಾಕ್ರೆ ಅವರಲ್ಲಿ ಅಸಮಾಧಾನ ಉಂಟು ಮಾಡಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಅವರು 50 ನಿಮಿಷಗಳ ಕಾಲ ಮಾತನಾಡಿದ್ದಾರೆ. ಆದರೆ, ಒಂದೇ ಒಂದು ಬಾರಿ ಶಿವಸೇನೆಯ ಹೆಸರು ಉಲ್ಲೇಖಿಸಿಲ್ಲ. ಹಲವು ಬಾರಿ ಮಹಾರಾಷ್ಟ್ರದಲ್ಲಿರುವುದು ಬಿಜೆಪಿ ಸರಕಾರ ಎಂದು ಹೇಳಿದ್ದಾರೆ. ‘ಮಿತ್ರ ಪಕ್ಷ’ ಅಥವಾ ‘ಮೈತ್ರಿ ಸರಕಾರ’ ಅಥವಾ ‘ಶಿವಸೇನೆ’ ಎಂಬ ಶಬ್ದಗಳನ್ನು ಅವರು ಒಂದು ಬಾರಿ ಕೂಡ ಹೇಳಿಲ್ಲ.