ಒಂದು ತಿಂಗಳ ಅವಧಿಯಲ್ಲಿ 8 ಪತ್ರಕರ್ತರ ವಿರುದ್ಧ ಉತ್ತರ ಪ್ರದೇಶ ಸರಕಾರದ ಗದಾಪ್ರಹಾರ
ಅವ್ಯವಸ್ಥೆ, ಸಮಸ್ಯೆಗಳ ವರದಿ ಮಾಡಿದ್ದೇ ತಪ್ಪಾಯ್ತು!
ಲಕ್ನೋ, ಸೆ.21: ಉತ್ತರ ಪ್ರದೇಶದ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ವೇಳೆ ರೋಟಿ ಹಾಗೂ ಉಪ್ಪು ನೀಡುತ್ತಿರುವ ವೀಡಿಯೋ ಬಹಿರಂಗಗೊಳಿಸಿದ ಪತ್ರಕರ್ತ ಪವನ್ ಜೈಸ್ವಾಲ್ ವಿರುದ್ಧ ಆಗಸ್ಟ್ ತಿಂಗಳಲ್ಲಿ ಕಾನೂನು ಕ್ರಮ ಕೈಗೊಂಡಿದ್ದ ರಾಜ್ಯದ ಆಡಳಿತ ಈ ಘಟನೆಯ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಕನಿಷ್ಠ ಎಂಟು ಮಂದಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.
ಸೆಪ್ಟಂಬರ್ 7ರಂದು ಬಿಜ್ನೋರ್ ಪೊಲೀಸರು ಜಾತಿ ತಾರತಮ್ಯ ಪ್ರಕರಣಗಳ ವರದಿ ಮಾಡಿದ ಐದು ಮಂದಿ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಅವರಲ್ಲಿ ಇಬ್ಬರು ಪತ್ರಕರ್ತರಾದ ಆಇಷ್ ತೋಮರ್ ಹಾಗೂ ಶಕೀಲ್ ಅಹ್ಮದ್ ದೈನಿಕ್ ಜಾಗರಣ್ ಹಾಗೂ ನ್ಯೂಸ್ 18ನ ಪತ್ರಕರ್ತರು.
ವಾಲ್ಮೀಕಿ ಕುಟುಂಬವೊಂದಕ್ಕೆ ಗ್ರಾಮದ ಕೈಪಂಪಿನಿಂದ ನೀರು ಎತ್ತಲು ನಿಷೇಧ ಹೇರಿದ ನಂತರ ಕುಟುಂಬ ತನ್ನ ಮನೆಯನ್ನು ಮಾರಾಟ ಮಾಡಲು ಬಯಸಿದ್ದ ವರದಿಯನ್ನು ಈ ಪತ್ರಕರ್ತರು ಪ್ರಕಟಿಸಿದ್ದರು. ಈ ಪ್ರಕರಣವನ್ನು ಗ್ರಾಮ ಮುಖ್ಯಸ್ಥ ಇತ್ಯರ್ಥಪಡಿಸಿದ್ದರೂ ಪತ್ರಕರ್ತರು ತಾವಾಗಿಯೇ ಸಂತ್ರಸ್ತ ಕುಟುಂಬ ತನ್ನ ಮನೆ ಮಾರಾಟ ಮಾಡಲಿದೆ ಎಂದು ಹೇಳಿಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು.
ಜಿಲ್ಲಾ ಮ್ಯಾಜಿಸ್ಟ್ರೇಟ್ ನಡೆಸಿದ ತನಿಖೆಯೂ ಪತ್ರಕರ್ತರು `ಸುಳ್ಳು' ಹಾಗೂ ಋಣಾತ್ಮಕ ಸುದ್ದಿ ಹರಡುತ್ತಿದ್ದಾರೆಂಬ ತೀರ್ಮಾನಕ್ಕೆ ಬಂದಿತ್ತು. ಈ ಘಟನೆಯ ವಿರುದ್ಧ ಸ್ಥಳೀಯ ಪತ್ರಕರ್ತರು ಸಿಡಿದೆದ್ದಿದ್ದರು.
ಸೆಪ್ಟೆಂಬರ್ 7ರಂದು ಆಝಂಘರ್ ಪೊಲೀಸರು ಪತ್ರಕರ್ತ ಸಂತೋಷ್ ಜೈಸ್ವಾಲ್ ಅವರನ್ನು ಬಂಧಿಸಿದ್ದರು. ಸರಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ನೆಲ ಒರೆಸುತ್ತಿರುವ ಫೋಟೋಗಳನ್ನು ಅವರು ಕ್ಲಿಕ್ಕಿಸಿದ ನಂತರ ಶಾಲಾ ಪ್ರಾಂಶುಪಾಲರು ವಿರೋಧಿಸಿದ್ದರು. ಆಗ ಜೈಸ್ವಾಲ್ ಅವರೇ ಪೊಲೀಸರಿಗೆ ಕರೆ ಮಾಡಿ ನಡೆದಿದ್ದನ್ನು ವಿವರಿಸಿದ್ದರು. ಆದರೆ ಶಾಲಾ ಪ್ರಾಂಶುಪಾಲರು ಜೈಸ್ವಾಲ್ ವಿರುದ್ಧವೇ ಆರೋಪ ಹೊರಿಸಿ ಆತ ಶಾಲೆಗೆ ಭೇಟಿ ನೀಡಿ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿ ತಮ್ಮ ಪತ್ರಿಕೆ ಖರೀದಿಸುವಂತೆ ಒತ್ತಾಯಿಸುತ್ತಿದ್ದರು ಎಂದು ದೂರಿದ್ದರು. ಜೈಸ್ವಾಲ್ ಅವರೇ ಮಕ್ಕಳಿಗೆ ನೆಲ ಒರಸುವಂತೆ ಹೇಳಿ ಫೋಟೋ ತೆಗೆದಿದ್ದರು ಎಂದೂ ಪ್ರಾಂಶುಪಾಲ ಆರೋಪಿಸಿದ್ದರು.
ಸರಕಾರಿ ಉದ್ಯೋಗಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಮೇಲೆ ಜೈಸ್ವಾಲ್ ಅವರನ್ನು ನಂತರ ಬಂಧಿಸಲಾಯಿತಾದರೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಧ್ಯ ಪ್ರವೇಶಿಸಿದ ಬಳಿಕ ಬಿಡುಗಡೆಗೊಳಿಸಲಾಗಿತ್ತು.